17 ನೇ ಎಸ್ಪಿ ಫೋನ್ ಇನ್ ಕಾರ್ಯಕ್ರಮ
ಬೆಳಗಾವಿ : ಜಿಲ್ಲೆಯ ಜನರ ಸಮಸ್ಯೆ ಬಗೆ ಹರಿಸಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದ ತಂಡ ನಡೆಸುತ್ತಿರುವ 17 ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಶನಿವಾರ ನಗರ ಸೇರಿದಂತೆ ಜಿಲ್ಲೆಯಿಂದ 83 ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.
ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳು ಸಂಚಾರ ನಡೆಸುತ್ತಿವೆ. ಇದರಿಂದ ವ್ಯಾಪರಸ್ಥರು ಹಾಗೂ ಮಾರುಕಟ್ಟೆಗೆ ಜನರಿಗೆ ತೊಂದರೆಯಾಗುತ್ತದೆ ಈ ಸಮಸ್ಯೆ ಬಗೆ ಹರಿಸುವಂತೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಮುಂದಿನ ಸಂತೆಯಲ್ಲಿ ಈ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.
ಗೋಕಾಕ ತಾಲೂಕಿನಲ್ಲಿ ಹಾಲು ಮಾರುವವರು ಹೋಟೆಲ್ ನಲ್ಲಿ ಕೆಲವರ ಮೇಲೆ ದಬ್ಬಾಳಿಕೆ ಮಾಡುವುದು, ವಲಸೆ ಬಂದಿರುವ ಬಂಗಾಳಿ ಕೆಲಸಗಾರರು ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಗೋಕಾಕ ನಗರದಲ್ಲಿ ಸಂಚಾರ ಸಮಸ್ಯೆ ಬಗೆ ಹರಿಸಬೇಕು. ಆಟೋ ಚಾಲಕರು ಬೇಕಾಬಿಟ್ಟಿ ವರ್ತನೆ ತೋರುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ಗೋಕಾಕ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯ ಕೆಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ ಮಾರಾಟ, ಮಟ್ಕಾ ಹಾವಳಿ, ಸಂಚಾರ ಸಮಸ್ಯೆ ತಲೆದೂರಿದ್ದು ಅದನ್ನು ಬಗೆ ಹರಿಸುವಂತೆ ಎಸ್ಪಿ ಅವರಿಗೆ ಜನರು ಕರೆ ಮಾಡಿ ದೂರಿದರು. ಅಲ್ಲದೆ ಕೆಲ ಕಡೆಯ ಶಾಲಾ ಆವರಣದಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬಿರುತ್ತದೆ ಅದನ್ನು ತಡೆಯುವಂತೆ ಕೆಲವರು ಕರೆ ಮಾಡಿ ದೂರಿದರು.
ತತಕ್ಷಣವೇ ಎಸ್ಪಿ ಸಂಜೀವ ಪಾಟೀಲ ಸಂಬಂಧಿಸಿದ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಮುಂದೆ ಇಂಥ ದೂರುಗಳು ಬರದಂತೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಎಚ್ಚರಿಕೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಸಿಪಿಐಗಳಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ ಬಳಿಗಾರ, ವಿಠ್ಠಲ್ ಮಾದರ ಉಪಸ್ಥಿತರಿದ್ದರು.


