ಉದ್ಯಮಿ ಅಪಹರಣ ಪ್ರಕರಣ : ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಬಂಧನ
ಬೆಳಗಾವಿ : ಐದು ಕೋಟಿ ರೂ. ಗೆ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಆಪ್ತೆಯನ್ನು ಬಂಧಿಸಿ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಫೆ.14 ದರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ ಅಂಬಿ ಎಂಬಾತನನ್ನು ಅಪಹರಿಸಿ ಐದು ಕೋಟಿ ರೂ. ಕೊಡುವಂತೆ ಧಮ್ಕಿ ಹಾಕಲಾಗಿತ್ತು. ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾಗ ಆರೋಪಿಗಳನ್ನು ಬಂಧಿಸಿ ಉದ್ಯಮಿಯನ್ನು ರಕ್ಷಣೆ ಮಾಡಲಾಗಿತ್ತು.
ಸಧ್ಯ ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು ಬಂಧಿತ ಆರೋಪಿಗಳ ಜಾಲ ಪತ್ತೆಯಾಗಿದೆ. ಗೋಕಾಕ್ ಪಟ್ಟಣದ ಕಣ್ಣೂರು ಗ್ರಾಮದ ಮಹಿಳೆ ಮಂಜುಳಾ ರಾಮನಗಟ್ಟಿ ಸೇರಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ರಾಮಣಗಟ್ಟಿ ಸತೀಶ್ ಜಾರಕಿಹೊಳಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತಾಲೂಕು ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಜವಾಬ್ದಾರಿ ಹೊಂದಿದ್ದರು. ಸಧ್ಯ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಹಾಕಲಾಗಿದೆ.


