ಬೆಳಗಾವಿ : ಯಾದವ ಸಂಘಟನೆ ಜೊತೆ ವಾಲ್ಮೀಕಿ ಸಂಘ ಹುಟ್ಟಿ ನೂರು ವರ್ಷ ಕಳೆದರೂ ಇನ್ನೂ ಈ ಸಮುದಾಯ ಅಭಿವೃದ್ಧಿ ಕಡೆ ಮುಖ‌ ಮಾಡಿಲ್ಲ. ಸಮುದಾಯದ ಜನ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವಾನಂದ ಸ್ವಾಮಿಗಳ 16 ನೇ ಪಟ್ಟಾಭಿಷೆಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ನಾನಾ ಭಾಗಗಳಲ್ಲಿ ವಿವಿಧ ಹೆಸರಿನಿಂದ ಕರೆಯಲಾಗುತ್ತಿದ್ದ ಯಾದವ ಸಮುದಾಯ ಒಂದೇ ವೇದಿಕೆಯಲ್ಲಿ ಸೇರಿದ್ದು ಸಂತೋಷ. ಇದೇ ರೀತಿಯಲ್ಲಿ ಸಮುದಾಯ ಸಂಘಟನೆ ಆಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸಮುದಾಯದ ಯುವಕರು ಸರಕಾರಿ ಸೇವೆಯಲ್ಲಿ ತೊಡಿಗಿಸಿಕೊಳ್ಳಬೇಕು ಎಂದರು.

ಯಾದವ ಸಮುದಾಯದ ಜನರ ಬೇಡಿಕೆ ಈಡೇರಿಸುವ ಕೆಲಸವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಲಿದೆ. ಚಿಕ್ಕೋಡಿ ಐತಿಹಾಸಿಕ ನೆಲದಲ್ಲಿ ಈ ಸಮಾವೇಶ ನಡೆಸಿದ್ದು ಖುಷಿ ತರಿಸಿದೆ. ಮುಂದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿ ಎಂದು ಹೇಳಿದರು.