ಅಥಿತಿ ಉಪನ್ಯಾಸಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ – ಹೆಚ್ಚಾಯ್ತು ಗೌರವಧನ
ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ₹5 ಸಾವಿರ ಹೆಚ್ಚಳ ಮಾಡಿದ್ದು, ಜ.1ರಿಂದಲೇ ಹೆಚ್ಚಳದ ಪ್ರಯೋಜನ ಶಿಕ್ಷಕರಿಗೆ ದೊರೆಯಲಿದೆ.
ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರ ಜತೆ ಶುಕ್ರವಾರ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ ಪ್ರಸ್ತುತ ₹26,000ದಿಂದ ₹ 32,000 ಇದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಲಾಭ ಸಮಾನವಾಗಿ ದೊರಕಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ₹55 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವ ವೇಳೆ ವರ್ಷಕ್ಕೆ ₹50 ಸಾವಿರದಂತೆ ಲೆಕ್ಕಹಾಕಿ ₹5 ಲಕ್ಷ ಧನಸಹಾಯ ನೀಡಲಾಗುವುದು. ಅದಕ್ಕಾಗಿ ₹72 ಕೋಟಿ ನಿಗದಿ ಮಾಡಲಾಗಿದೆ ಎಂದರು.
ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಕಾಯಂ ಸಿಬ್ಬಂದಿ ಅತಿಥಿ ಉಪನ್ಯಾಸಕರನ್ನು ಗೌರವದಿಂದ ಕಾಣಬೇಕು. ತಾರತಮ್ಯ ಮಾಡಬಾರದು, ಅವರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಒಮ್ಮೆ ಕೌನ್ಸೆಲಿಂಗ್ನಲ್ಲಿ ಆಯ್ಕೆಯಾದವರಿಗೆ ಕೆಲಸದ ಅವಧಿ ಕಡಿಮೆಯ ಕಾರಣ ನೀಡಿ ತೆಗೆದುಹಾಕುವಂತಿಲ್ಲ.
10 ತಿಂಗಳು ಗೌರವಧನ ನೀಡುವುದು ಕಡ್ಡಾಯ. ಪ್ರತಿ ತಿಂಗಳು ಒಂದು ವೇತನ ಸಹಿತ ರಜೆ ನೀಡಲು ಸಮ್ಮತಿಸಲಾಗಿದೆ. ಪ್ರತಿ ವರ್ಷ ಕೌನ್ಸೆಲಿಂಗ್ಗೆ ಹಾಜರಾಗುವುದು ಕಡ್ಡಾಯವಿದ್ದರೂ, ಒಮ್ಮೆ ದಾಖಲೆ ಸಲ್ಲಿಸಿದವರು ಮತ್ತೆ ಸಲ್ಲಿಸುವ ಅಗತ್ಯವಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎಂದರು.


