ಬೆಳಗಾವಿ : ನಾವೇನು ಉಪ್ಪಿನಕಾಯಿ ನೆಕ್ಕಲು ಮಾತ್ರ ಇಲ್ಲ. ನಮಗೂ ರಾಜಕಾರಣ ಗೊತ್ತಿದೆ.‌ ಅವಿರೋಧ ಆಯ್ಕೆಯಾಗಿವೆ ಎಂದ ಮಾತ್ರಕ್ಕೆ ಅಧ್ಯಕ್ಷ ಹುದ್ದೆ ಅವರಿಗೆ ಎಂದಲ್ಲ. ರಾಯಬಾಗ ಕ್ಷೇತ್ರ ಗೆಲುವು ಸಾಧಿಸಿದರೆ ಡಿಸಿಸಿ ಅಧ್ಯಕ್ಷ ಸ್ಥಾ‌ನ ನಮ್ಮ ಬಣಕ್ಕೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗುಡುಗಿದರು.

ಬುಧವಾರ ಹಾರೂಗೇರಿಯಲ್ಲಿ ನಡೆದ ಡಿಸಿಸಿ ನಿರ್ದೇಶಕ ಸ್ಥಾನದ ರಾಯಬಾಗ ಕ್ಷೇತ್ರದ ಅಭ್ಯರ್ಥಿ ಬಸಗೌಡ ಆಸಂಗಿ ಪರವಾಗಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ವಿರೋಧಿ ಬಣದವರು ಮಾಡುವ ಕುತಂತ್ರ ಜನರಿಗೆ ಅರ್ಥವಾಗಿದೆ. ದಶಕಗಳ ಇತಿಹಾಸ ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕನ್ನು ವೈಯಕ್ತಿಕ ಲಾಭಕ್ಕೆ ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಬಾರಿ ನಮಗೆ ಆಶಿರ್ವಾದ ಮಾಡಬೇಕು ಎಂದರು.

ಒಂದು ಮತಕ್ಕೆ ಒಂದು‌ ಲಕ್ಷ ರೂ. ಕೊಡುತ್ತಿದ್ದಾರೆ. ನಾವು ಬಂದು ಹೋದಮೇಲೆ ಅದರ ಬೆಲೆ ಹೆಚ್ಚಾಗಬಹುದು. ಹಣ ಕೊಟ್ಟು ಸಹಕಾರಿ ಸಂಘದ ಚುನಾವಣೆ ಮಾಡುತ್ತಿದ್ದಾರೆ ಎಂದರೆ ಜನ ಅರ್ಥ ಮಾಡಿಕೊಳ್ಳಬೇಕು. ತಾಲೂಕಿನ ಮತದಾರರು ಪ್ರಜ್ಞಾವಂತರಿದ್ದು ಯಾವುದೇ ಕಾರಣಕ್ಕೂ ವಿರೋಧಿ ಬಣ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಹರಿಹಾಯ್ದರು.