ಅಧಿವೇಶನದಲ್ಲಿ ಸ್ಪೋಟಗೊಳ್ಳುವುದಾ ಜಮೀರ್ ಮುಸ್ಲಿಂ ಸ್ಪೀಕರ್ ಹೇಳಿಕೆ ವಿವಾದ…?
ಬೆಳಗಾವಿ : ಮುಸ್ಲಿಂ ಸಮುದಾಯದ ಸ್ಪೀಕರ್ ಗೆ ಬಿಜೆಪಿ ಸದಸ್ಯರು ತಲೆಬಾಗಿ ನಮಸ್ಕಾರ ಹೇಳುತ್ತಾರೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿವಾದ ಇಂದು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಸ್ಪೋಟಿಸಬಹುದು ಎಂದು ಹೇಳಲಾಗುತ್ತಿದೆ.
ಇಂದು ಜಮೀರ್ ಅವರ ಹೇಳಿಕೆ ಇಟ್ಟುಕೊಂಡು ಆಡಳಿತ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಲು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಹೋರಾಟ ಮಾಡಬಹುದು ಎಂದು ಹೇಳಲಾಗುತ್ತಿದೆ. ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಜಮೀರ್ ಮೇಲೆ ಮುಗಿಬೀಳುವುದಾ ಎಂಬುದನ್ನು ಕಾದು ನೋಡಬೇಕು.
ಕಳೆದ ತೆಲಂಗಾಣ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಸ್ಪೀಕರ್ ಹುದ್ದೆಯಲ್ಲಿ ಮುಸ್ಲಿಂ ವ್ಯಕ್ತಿ ಇದ್ದು ಅವರಿಗೆ ಬಿಜೆಪಿ ತಲೆಬಾಗಿ ನಮಸ್ಕಾರ ಮಾಡುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈಗಾಗಲೇ ಬಿಜೆಪಿ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ್ದು ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಆದರೆ ಇಂದು ನಡೆಯುವ ಕಲಾಪದಲ್ಲಿ ಚರ್ಚಿಸುವ ಸಾಧ್ಯತೆ ಇದೆ.


