ಬೆಳಗಾವಿ : ವಾಲ್ಮೀಕಿ ಸಮುದಾಯದ ಬಡವರ ಕಲ್ಯಾಣಕ್ಕಾಗಿ ‌ಮೀಸಲಿಟ್ಟ ಹಣವನ್ನು ಸಚಿವರೊಬ್ಬರು ತಮ್ಮ ಅಧಿಕಾರ ಬಳಸಿ ಹಣ ದುರ್ಬಳಕೆ ಮಾಡಿಕೊಂಡ ಗಂಭೀರ ಆರೋಪ ಎದುರಿಸುತ್ತಿದ್ದರೂ ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದು ದುರದೃಷ್ಟಕರ ಸಂಗತಿ.‌‌ ಕೂಡಲೇ ಸಚಿವ ಬಿ. ನಾಗೇಂದ್ರ ಅವರನ್ನು ವಜಾಗೊಳಸಬೇಕೆಂದು ಬಿಜೆಪಿ ಮಹಿಳಾ‌ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇವರು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ್ದ ಸುಮಾರು 187 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅಕ್ರಮವಾಗಿ ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ನ್ಯಾಯಾಲಯದಿಂದ ಆದೇಶ ಹೊರಬರುವ ಮುಂಚೆಯೇ ಕಾಂಗ್ರೆಸ್ ಸರಕಾರದಲ್ಲಿ ಮತ್ತೊಮ್ಮೆ ಬಿ. ನಾಗೇಂದ್ರ ಸಚಿವರಾಗಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ನಾಗೇಂದ್ರ ಅವರು ಭ್ರಷ್ಟಾಚಾರದ ಆರೋಪದ ಮೇಲೆಯೇ ರಾಜೀನಾಮೆ ಪಡೆಯಲಾಗಿತ್ತು. ಅಂದು ಅಧಿವೇಶನ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವ್ಯವಹಾರ ಆಗಿದ್ದನ್ನು ಒಪ್ಪಿಕೊಂಡಿದ್ದರು. ಆದರೆ ಇನ್ನೂ ತನಿಖೆ ಮುಕ್ತಾಯವಾಗುವ ಮೊದಲೇ ಮತ್ತೊಮ್ಮೆ ಸಚಿವಸ್ಥಾನ ನೀಡಿದ್ದು ದುರಂತ ಎಂದರು.

ಕೂಡಲೇ ಸಚಿವ ಬಿ. ನಾಗೇಂದ್ರ ಅವರನ್ನು ಕಾಂಗ್ರೆಸ್ ಸರಕಾರ ಸಂಪುಟದಿಂದ ವಜಾಗೊಳಿಸಬೇಕು. ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಿ, ವಾಲ್ಮೀಕಿ ‌ಸಮುದಾಯಕ್ಕೆ ಮೀಸಲಿಟ್ಟ ಹಣ ಅಲ್ಲಿ‌ನ ಬಡವರಿಗೆ ಉಪಯೋಗವಾಗಬೇಕು. ಅಲ್ಲಿಯವರೆಗೆ ಬಿಜೆಪಿ ‌ನಿರಂತರ ಹೋರಾಟ ಕೈಗೊಳ್ಳುತ್ತದೆ ಎಂದಿದ್ದಾರೆ.