ರೈತ ಹೋರಾಟದ ಕಿಚ್ಚು ; ಅಥಣಿ ಸಂಪೂರ್ಣ ಬಂದ್
ಅಥಣಿ :ಪ್ರತಿ ಟನ್ ಕಬ್ಬಿಗೆ 3,500 ರೂ.ದರ ನೀಡುವಂತೆ ಅಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಅಥಣಿ ಪಟ್ಟಣದಲ್ಲಿ 2ನೇ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಅಥಣಿ ಪಟ್ಟಣದ ಬಸವೇಶ್ವರ ವೃತ್ತ, ಶಿವಯೋಗಿ ವೃತ್ತ, ಅಂಬೇಡ್ಕರ್ ವೃತ್ತ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಗಳಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ ಅನಿಸುತ್ತಿದ್ದಾರೆ. ಗೋಕಾಕ್ ರಸ್ತೆಯ ದರೂರ್ ಸೇತುವೆ ಹತ್ತಿರ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಮತ್ತು ರೈತ ಮಹಿಳೆಯರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಸಾರಿಗೆ ಬಸ್ ಸಂಚಾರ ಸೇರಿದಂತೆ ಕಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣ ತಡೆಗಟ್ಟಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದು, ಪಟ್ಟಣದ ಬಹುತೇಕ ಅಂಗಡಿ, ಮುಗ್ಗಟ್ಟು ಗಳು ಬಂದ್ ಆಗಿದ್ದು, ಅಥಣಿ ಮುಖ್ಯ ಮಾರುಕಟ್ಟೆ ವ್ಯಾಪಾರ ಇಲ್ಲದೆ ಬಿಕೋ ಎನ್ನುತ್ತಿದೆ.
ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ, ತುರ್ತು ಕೆಲಸಗಳ ನಿಮಿತ್ತ ಬೇರೆ ಊರಿಗೆ ಹೋಗುವ ಪ್ರಯಾಣಿಕರಿಗೆ , ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಎದುರಿಸುವಂತಾಗಿದೆ. ಅನೇಕ ಖಾಸಗಿ ಶಾಲಾ ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಶಾಲಾ ವಾಹನ ಸಂಚಾರವನ್ನು ಸ್ಥಗಿತ ಮಾಡಿದ್ದಾರೆ.
ಅಥಣಿ ಡಿ ಎಸ್ ಪಿ ಪ್ರಶಾಂತ ಮುನ್ನಳ್ಳಿ, ಸಿ ಪಿ ಐ ಸಂತೋಷ ಹಳ್ಳೂರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಅವರ ಸಿಬ್ಬಂದಿ ಬ್ಯಾರಿಕೇಡಗಳನ್ನು ಅಳವಡಿಸಿ ಪ್ರತಿಭಟನಾ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.


