ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ; ಚಿತ್ರಹಿಂಸೆ ಕೊಟ್ಟು ಯುವಕನ ಕೊಲೆ
ಖಾನಾಪುರ : ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಕೂಡಿಹಾಕಿ ಚಿತ್ರಹಿಂಸೆ ಕೊಟ್ಟು ಗಂಭೀರ ಹಲ್ಲೆಯಿಂದ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿರುವ ಘಟನೆ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.
ಮಾಣಿಕವಾಡಿ ನಿವಾಸಿ ವೆಂಕಪ್ಪ ಮೈಯೆಕರ್(18) ಸಾವನ್ನಪ್ಪಿರುವ ಕಾರ್ಮಿಕ. ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್ನಲ್ಲಿ ಮೂರು ತಿಂಗಳಿನಿಂದ ಈತ ಕೆಲಸ ಮಾಡುತ್ತಿದ್ದ.
ಆ.20 ರಂದು ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ, ಆತನನ್ನು ಕೂಡಿ ಹಾಕಿ ಹೋಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ, ಸಹೋದರ ವಿಜಯ್ ಬೆಡರೆ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ತೀವ್ರ ಗಾಯಗೊಂಡ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಯುವಕನ ಪೋಷಕರಿಗೆ ಹೋಟೆಲ್
ಮಾಲೀಕ 10 ಸಾವಿರ ರೂ. ಹಣ ನೀಡಿ, ದೂರು ನೀಡದಂತೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಹೋಟೆಲ್ ಮಾಲೀಕನ ಧಮ್ಕಿಗೆ ಹೆದರಿ ಪೊಲೀಸರಿಗೆ ದೂರು ನೀಡಲು ಯುವಕನ ತಂದೆ, ತಾಯಿ ಹಿಂಜರಿದಿದ್ದರು.
ಈ ವಿಚಾರ ತಿಳಿದ ಗ್ರಾಮಸ್ಥರು ಯುವಕನ ತಂದೆಯ ಬೆನ್ನಿಗೆ ನಿಂತು, ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ.


