ಭೀಕರ ರಸ್ತೆ ಅಪಘಾತ ; 20ಕ್ಕೂ ಹೆಚ್ಚು ಜನರಿಗೆ ಗಾಯ
ಬೈಲಹೊಂಗಲ : ಸಾರಿಗೆ ಸಂಸ್ಥೆ ಬಸ್ ಹಾಗೂ ಮಿನಿ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಅಂದಾಜು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.
ಬೈಲಹೊಂಗಲ ತಾಲೂಕಿನ ತಿಗಡಿ- ತಿಗಡಿ ಕ್ರಾಸ್ ಮಧ್ಯ ಈ ದುರ್ಘಟನೆ ಸಂಭವಿಸಿದೆ. ತಿಗಡಿ ಕಡೆಯಿಂದ ಬೈಲಹೊಂಗಲದ ಕಡೆಗೆ ಪ್ರಯಾಣಿಕರನ್ನು ಹೊತ್ತ ಸಾರಿಗೆ ಬಸ್ ಸಂಚರಿಸುತ್ತಿತ್ತು. ಇದೇ ಸಮಯಕ್ಕೆ ತಿಗಡಿ ಕ್ರಾಸ್ ಕಡೆಯಿಂದ ಎದುರಿಗೆ ಬಂದ ಇಟ್ಟಿಗೆ ತುಂಬಿದ್ದ ಮಿನಿಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಇನ್ನೂ ಮಿನಿಲಾರಿಯೂ ಜಖಂ ಆಗಿದ್ದು, ಲಾರಿ ಚಾಲಕ ಸೇರಿದಂತೆ ಇನ್ನೂಳಿದವರಿಗೂ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ. ಈ ಅಪಘಾತದಿಂದ ಎರಡು ವಾಹನಗಳು ನಡುರಸ್ತೆಯಲ್ಲಿ ನಿಂತಿದ್ದರಿಂದ ಇನ್ನೂಳಿದ ವಾಹನ ಸವಾರರಿಗೂ ಸಂಚಾರಕ್ಕೆ ತೀವ್ರ ತೊಂದರೆ ಆಯಿತು.
ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಿಕಟ್ಟಿಯಿಂದ ತಿಗಡಿ ಕ್ರಾಸ್ ವರೆಗೆ ಇರುವ ತಿರುವುಗಳ ಪಕ್ಕದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ಎದುರಿಗೆ ಬರುವ ವಾಹನಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಿರುವುಗಳಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.
ರಸ್ತೆಪಕ್ಕದಲ್ಲಿರುವ ಗಿಡಗಂಟಿಗಳು ಅರ್ಧ ರಸ್ತೆಯನ್ನು ಆವರಿಸಿವೆ. ಅಲ್ಲದೇ ತಿರುವುಗಳ ಪಕ್ಕದಲ್ಲಿನ ಗಿಡಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೂ ಕ್ರಮಕೈಗೊಂಡಿಲ್ಲ, ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


