ಭಾರತಕ್ಕೆ ವಿಶ್ವದ ಸೆಮಿ ಕಂಡಕ್ಟರ್ ಹಬ್ ಆಗುವ ಸಾಮರ್ಥ್ಯವಿದೆ : ಪ್ರೊ ವಿದ್ಯಾಶಂಕರ್ ಎಸ್
ಬೆಳಗಾವಿ : ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಸೆಮಿಕಂಡಕ್ಟರ್ ಹಬ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿ ಈ ಬೆಳವಣಿಗೆ ರಾಷ್ಟ್ರದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್ ಅಭಿಪ್ರಾಯಪಟ್ಟರು.
ಸೋಮವಾರ ವಿಟಿಯು ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನೀರ್ಸ್ ವುಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸರ್ಕ್ಯೂಟ್ ಕ್ರಾಫ್ಟಿಂಗ್” ಇಂಡಸ್ಟ್ರಿ ಲೀಡರ್ಸ್ ಜೊತೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡುತಿದ ಇವರು, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಂತ್ರಜ್ಞಾನಕ್ಕೆ ಬಳಸಿಕೊಳ್ಳುವ ಮೂಲಕ ಇವತ್ತಿನ ಔದ್ಯೋಗಿಕ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಯನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
ವೇಗವಾದ ಮತ್ತು ಹೆಚ್ಚು ಶಕ್ತಿಶಾಲಿ ಇಂಟಿಗ್ರೇಟೆಡ್ ಸರ್ಕ್ಯೂಟ್ಗಳ ರಚನೆಯು ಸಾಮಾನ್ಯವಾಗಿ ಹೊಸ ಕಂಪ್ಯೂಟರ್ಗಳ ವಿನ್ಯಾಸಕ್ಕೆ ಕಾರಣವಾಯಿತು ಇದೆ ಮುಂದುವರೆದು ಹೊಸ ಸ್ಮಾರ್ಟ್ಫೋನ್ಗಳು ಮತ್ತು ಇತರ ಸಾಧನಗಳ ರಚನೆಗೆ ಕಾರಣವಾಯಿತು. ಈ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆ ಸೆಮಿಕಂಡಕ್ಟರ್ ಚಿಪ್ ಗಳ ರಚನೆಯಲ್ಲಿ ಒಂದು ಕ್ಷಿಪ್ರ ರೂಪಾಂತರಕ್ಕೆ ಕಾರಣವಾಗುತ್ತಿದೆ. ಸೆಮಿಕಂಡಕ್ಟರ್ ಚಿಪ್ ಕ್ಷೇತ್ರವು ಒಂದು ಚಿಪ್ ಬಳಕೆಯ ವಿಧಾನದಿಂದ ನಿಧಾನವಾಗಿ ದೂರ ಸರಿಯುತಿದ್ದು ವಿವಿಧತೆ, ವೈವಿಧ್ಯತೆ ಮತ್ತು ನಾವೀನ್ಯತೆಯ ಹೊಸ ರಚನಾ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.
ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಎಸ್.ಅನಾಮಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ನುರಿತ ಮಾನವ ಸಂಪನ್ಮೂಲದ ಕೊರತೆ ಇರುವುದರಿಂದ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಅಂತಹ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಹೇಳಿದರು.
ಐಇಇಇ ಬೆಂಗಳೂರು ವಿಭಾಗದ ಸಿಎಎಸ್ ವಿಭಾಗದ ಅಧ್ಯಕ್ಷರಾದ ಅಯಾನ್ ದತ್ತಾ ಮಾತನಾಡಿ, ಕೆಲವು ಉದಾಹರಣೆಗಳೊಂದಿಗೆ ಚಿಪ್ ವಿನ್ಯಾಸದಲ್ಲಿ ಕೌಶಲ್ಯಪೂರ್ಣ ಎಂಜಿನಿಯರ್ಗಳ ಕೊರತೆಯ ಪ್ರಮಾಣವನ್ನು ಎತ್ತಿ ತೋರಿಸಿದರು.
ವಿಟಿಯು ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ, ವಿಟಿಯು ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿ.ಎನ್. ಶ್ರೀನಿವಾಸ ಮಾತನಾಡಿದರು. ವಿಟಿಯುನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಧ್ಯಕ್ಷೆ ಡಾ.ಮೇಘನಾ ಕುಲಕರ್ಣಿ ಸ್ವಾಗತಿಸಿದರು, ಐಇಇಇ ಯ ಉತ್ತರ ಕರ್ನಾಟಕ ವಿಭಾಗದ ಪ್ರೊ.ರವಿ ಹೊಸಮನಿ ವಂದಿಸಿದರು. ಉತ್ತರ ಕರ್ನಾಟಕ ಚೇರ್ ಪ್ರೊ.ಅಭಿಷೇಕ್ ದೇಶಮುಖ್, ಉದ್ಯಮ ಪ್ರತಿನಿಧಿಗಳು ಮತ್ತು ಉತ್ತರ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


