ಅಥಣಿ : ಹಾಲಿನ ವಾಹನ ಪಲ್ಟಿ : ಚಾಲಕ ಪಾರು
ಅಥಣಿ : ತಾಲೂಕಿನ ಸವದಿ ಗ್ರಾಮದ ಹತ್ತಿರದ ಝೀರೋ ಪಾಯಿಂಟ ಹಾಗೂ ಹಿಪ್ಪರಗಿ ಮಾರ್ಗ ಮಧ್ಯದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಾಲು ತುಂಬಿದ ವಾಹನ ಪಲ್ಟಿ ಯಾಗಿ ಕಮರಿಗೆ ಉರುಳಿರುವ ಘಟನೆ ಗುರುವಾರ ಸಾಯಂಕಾಲ ಜರುಗಿದ್ದು, ವಾಹನ ಚಾಲಕ ಮತ್ತು ಕ್ಲೀನರ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಸು. 14 ಸಾವಿರ ಲೀಟರ್ ಹಾಲು ತುಂಬಿಕೊಂಡು ಹಿಪ್ಪರಗಿ ಕಡೆಯಿಂದ ಅಥಣಿ ಕಡೆಗೆ ಬರುತ್ತಿದ್ದ ವಾಹನ ಸವದಿ ಕ್ರಾಸ್ ಹತ್ತಿರ ಹಿಪ್ಪರಗಿ ಡ್ಯಾಮ ಮುಖ್ಯ ರಸ್ತೆಯಿಂದ ಕೆಳಗಿನ ರಸ್ತೆಗೆ ಚಾಲಕ ವಾಹನ ಇಳಿಸಲು ಹೋದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ವಾಹನದಲ್ಲಿರುವ 10 ಸಾವಿರಕ್ಕೂ ಅಧಿಕ ಲೀಟರ್ ಹಾಲು ನೆಲಕ್ಕೆ ಚೆಲ್ಲಿ ಹಾಳಾಗಿದೆ.
ಅಥಣಿಯಿಂದ ಜಮಖಂಡಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬರವ ಝೀರೋ ಪಾಯಿಂಟ ದಿಂದ ಹಿಪ್ಪರಗಿ ಅಣೆಕಟ್ಟಿನವರಿಗೆ ರಸ್ತೆಯು ಎತ್ತರದಲ್ಲಿದ್ದು, ಯಾವುದೇ ಸುರಕ್ಷತೆ ಇರುವುದಿಲ್ಲ.
ಇದೇ ಮಾರ್ಗದಲ್ಲಿ ಅನೇಕ ಸಾರಿಗೆ ಬಸ್ ಗಳು, ಕಬ್ಬು ತುಂಬಿದ ಟ್ಯಾಕ್ಟರ್ ಗಳು, ಶಾಲಾ ಮಕ್ಕಳ ವಾಹನಗಳು, ಖಾಸಗಿ ವಾಹನಗಳು ಓಡಾಡುತ್ತಿದ್ದು, ಎದುರಿಗೆ ವಾಹನಗಳು ಬಂದರೆ ಇಕ್ಕಟ್ಟಾದ ರಸ್ತೆಯಿಂದಲೇ ಪಾರಾಗಬೇಕು.
ಕೆಲವು ವೇಳೆ ಆಯತಪ್ಪಿ ಕಮರಿಗಿಬಿದ್ದು ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ವಾಹನಗಳ ಸುರಕ್ಷತಾ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


