ಕಾಲ್ತುಳಿತ ಪ್ರಕರಣ : ಗುಪ್ತಚರ ವಿಭಾಗ ಎಡಿಜಿಪಿ ಹೇಮಂತ ನಿಂಬಾಳ್ಕರ್ ಎತ್ತಂಗಡಿ, ಸಿಎಂ ರಾಜಕೀಯ ಕಾರ್ಯದರ್ಶಿಗೆ ಕೋಕ್..!
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರ ಬದಲಾವಣೆ ಸೇರೆ ಅನೇಕರ ಬದಲಾವಣೆ ಆಗಿತ್ತು. ಸಧ್ಯ ಗುಪ್ತಚರ ವಿಭಾಗದ ಎಡಿಜಿಪಿ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಕರ್ತವ್ಯಲೋಪ ಆರೋಪದ ಮೇಲೆ ಗುಪ್ತಚರ ವಿಭಾಗದ ಎಡಿಜಿಪಿ ಹೇಮಂತ ನಿಂಬಾಳ್ಕರ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಗುಪ್ತಚರ ಇಲಾಖೆ ಸಿಎಂ ಬಳಿ ಇರುವ ಕಾರಣಕ್ಕೆ ಪ್ರಕರಣ ಅವರ ಬುಡಕ್ಕೆ ಬರಬಾರದು ಎಂದು ಕ್ರಮ ಜರುಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೆ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದ ಎಂಎಲ್ಸಿ ಗೋವಿಂದ ರಾಜೂ ಅವರನ್ನು ಸ್ಥಾನದಿಂದ ತೆರವು ಮಾಡಲಾಗಿದೆ. ಒಟ್ಟಿನಲ್ಲಿ ಕಾಲ್ತುಳಿತ ಪ್ರಕರಣ ಸರಕಾರಕ್ಕೆ ಸಂಕಷ್ಟ ತಂದಿದ್ದು, ಇದರಿಂದ ಇನ್ನೂ ಕೆಲ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ನಿನ್ನೆ ನಡೆದ ಸುದ್ದಿಗೋಷ್ಠಿ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗುಪ್ತಚರ ವೈಫಲ್ಯದ ಕುರಿತು ಒಪ್ಪಿಕೊಂಡಿದ್ದರು. ಆದರೆ ಇಂದು ಎಡಿಜಿಪಿ ಯನ್ನು ಎತ್ತಂಗಡಿ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.


