ಬೆಂಗಳೂರು : ಮಾಜಿ ಸಚಿವ ಬಿ.ಸಿ. ಪಾಟೀಲರ ಮೊದಲ ಪುತ್ರಿ ಸೌಮ್ಯ ಅವರ ಪತಿ ಕೆ.ಜಿ. ಪ್ರತಾಪ್‌ ಕುಮಾರ್‌ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಕೆರೆ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಜಿ ಸಚಿವರ ಅಳಿಯನ ಸಾವಿಗೆ ಏನು ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಕುರಿತು ಮಾಜಿ ಸಚಿವ ಬಿ.ಸಿ ಪಾಟೀಲ್ ಅವರೇ ಒಂದು ಹೇಳಿಕೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಮಗಳಿಗೆ ಮದುವೆಯಾಗಿ 16 ವರ್ಷ ಆಗಿದ್ದು, ಮಕ್ಕಳಾಗಿಲ್ಲ. ಈ ಕಾರಣಕ್ಕೆ ಕೊರಗಿನಲ್ಲಿದ್ದ ಅಳಿಯ ಪ್ರತಾಪ್‌ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ.

ಹೊನ್ನಾಳಿ ಅರಕೆರೆ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಡಿದವರು ಅವರನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವಿಷಯವನ್ನು ಸೋದರ ಮಧ್ಯಾಹ್ನ ನನಗೆ ತಿಳಿಸಿದ್ದರು. ಬಳಿಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಸೇರಿದಿರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದರು.

ಪ್ರತಾಪ್‌ ಕಾಣೆಯಾದ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದೆ. ನಂತರ ಹೊನ್ನಾಳಿಯಲ್ಲಿ ಜೋಳಕ್ಕೆ ವಿಷ ಬೆರಸಿ ಕುಡಿದಿರುವುದು ತಿಳಿಯಿತು. ಮಕ್ಕಳಿಲ್ಲವೆಂಬ ಕೊರಗಿನಲಿದ್ದ ಅವರನ್ನು ಎರಡು ತಿಂಗಳು ಡಿಅಡಿಕ್ಟ್‌ ಸೆಂಟರ್‌ನಲ್ಲೂ ಇರಿಸಲಾಗಿತ್ತು.

ಸರಿ ಹೋಗಿದ್ದ ಅವರು ನಮ್ಮ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು.ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ನಾಳೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಪಾಟೀಲ್‌ ತಿಳಿಸಿದ್ದಾರೆ.