Select Page

Advertisement

ಕ್ರೈಸ್ತ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಕ್ರೈಸ್ತ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಕ್ರೈಸ್ತ, ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ಸಮಾದವರು ಅಪಾರ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದರಿಂದ 136 ಸೀಟು ಗೆದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಲು ಸಾಧ್ಯವಾಗಿದೆ ಅಂದರೆ ತಪ್ಪಾಗಲ್ಲ. ವಿಶೇಷವಾಗಿ ಕ್ರೈಸ್ತ ಸಮುದಾಯ ಬಾಂಧವರು ಕಾಂಗ್ರೆಸ್‌ ಪಕ್ಷದ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದ ಡಾ. ಜೆ.ಟಿ. ಸಿಮಂಡ್ಸ ಹಾಲ್ ನಲ್ಲಿ ಬೆಳಗಾವಿ ಜಿಲ್ಲಾ ಕ್ರೈಸ್ತ ಸಮಾಜ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮಾಜದ ಮುಖಂಡರು ಹಲವು ಬೇಡಿಕೆಗಳನ್ನು ಈಡೇರಿಸಲು ಮನವಿ ನೀಡಿದ್ದು, ಸರ್ಕಾರದಿಂದ ದೊರಕುವ ಸೌರ್ಕರ್ಯಗಳನ್ನು ಶಾಸಕ ಆಶೀಪ್‌ ಸೇಠ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಕ್ರೈಸ್ತ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಕಾರ್ಯ ಮಾಡುತ್ತೇವೆಂದು ಭರವಸೆ ನೀಡಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಷ್ಟು ಕ್ರೈಸ್ತ ಸಮಾಜವನ್ನು ಗೌರವದಿಂದ ಕಾಣುವ ಸರ್ಕಾರ ಇನ್ನೊಂದಿಲ್ಲ. ಆದ್ದರಿಂದ ನಮ್ಮ ಚಿಂತನೆಗಳು ಬದಲಾಗಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ. ಒಳ್ಲೆಯ ಶಿಕ್ಷಣ ಪಡೆದು, ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.

ಮದರ್ ತೆರೇಸಾ ಅವರು ಜಗತ್ತಿಗೆ ಪ್ರೀತಿ ವಾತ್ಸಲ್ಯ ಹಂಚಿದವರು. ಮದರ್ ತೆರೇಸಾ ಸುಮಾರು 45 ವರ್ಷಗಳ ಕಾಲ ಬಡವರು, ರೋಗಿಗಳು, ಅನಾಥರು, ಸಂಕಷ್ಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಶಿಕ್ಷಣಕ್ಕೆ ಅವರು ನೀಡದ ಕೊಡುಗೆ ಅಪಾರವಾಗಿದೆ. ಅದೇ ರೀತಿ ನಾವು ಕೂಡ ಯಾವುದೇ ಧರ್ಮದಲ್ಲಿ, ಜಾತಿಯಲ್ಲಿ ಹುಟ್ಟಿದರೂ ನಮ್ಮ ಆದ್ಯತೆ ಮೊದಲು‌ ಮನುಷ್ಯನಾಗಿ ಬದುಕುವುದು ಅವಶ್ಯವಾಗಿದೆ ಎಂದರು.

ಕ್ರೈಸ್ತ ಸಮಾಜಕ್ಕೆ ಒಂದು ಎಂಎಲ್‌ಸಿ ಸ್ಥಾನ ನೀಡಬೇಕೆಂಬ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೈಸ್ತ ಸಮುದಾಯಕ್ಕೆ ರಾಜಕೀಯ ಸ್ಥಾನ ಮಾನ ನೀಡಲಾಗುವುದು ಎಂದ ಅವರು, ಈ ಸಮಾವೇಶ ಸಡೆಯುವ ಸ್ಥಳವನ್ನು ಕಿತ್ತು ಕೊಳ್ಳಲು ಕೆಲವರು ಸಂಚು ರೂಪಿಸಿದ್ದಾರೆ. ನಿಮ್ಮ ಜತೆ ನಾವು ಇದ್ದೇವೆ. ನಿಮ್ಮ ಸಮಾಜ ಒಗ್ಗಟ್ಟು ಇದ್ದರೆ ಮಾತ್ರ ಈ ಜಾಗ ಪಡೆಯಲು ಸಾಧ್ಯವಿದೆ. ಸದ್ಯ ಕಾನೂನು ಹೋರಾಟ ನಡೆಯುತ್ತಿದ್ದು, ನಿಮ್ಮ ಕಷ್ಟಕ್ಕೆ ಸದಾ ಸ್ಪದಿಸುವ ಕಾರ್ಯವನ್ನು ನಾನು ಮಾಡುತ್ತೇನೆಂದು ತಿಳಿಸಿದರು.

ಶಾಸಕ ಆಶೀಪ್ ( ರಾಜು) ಸೇಠ್ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಲು ಕ್ರೈಸ್ತ ಸಮುದಾಯದರು ಬೆಂಬಲಿಸಿದ್ದಾರೆ. ಸಮುದಾಯದ ಮುಖಂಡರಿಗೆ, ಸಮಾಜದ ಫಾಸ್ಟರ್ ಗಳಿಗೆ ಧನ್ಯವಾದಗಳು. ಕ್ರೈಸ್ತ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಮುಂದೆವರೆದಿದೆ. ತಮ್ಮ ಜತೆ ಎಲ್ಲ ಸಮಾಜವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಿಮಗೋಸ್ಕರ ಸಚಿವ ಸತೀಶ್ ಜಾರಕಿಹೊಳಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಮುಂದೊಂದು ದಿನ ಸತೀಶ್ ಜಾರಕಿಹೊಳಿಯವರು ರಾಜ್ಯದ ಮುಖ್ಯಮಂತ್ರಿಯಾಗುದು ಖಚಿತವೆಂದರು.

ಮಾಜಿ ಉಪ ಸಭಾಪತಿ ದೇವಿಡ್ ಸೊಮಿಯೋನ್‌ ಮಾತನಾಡಿ, ಕ್ರೈಸ್ತ ಸಮಾಜದವರು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಬಹಳ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದು, ಸಮಾಜ ಬಾಂಧವರು ಈ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಹೆಬ್ಬಾಳಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮೆಥೋಡಿಟ್ ಚರ್ಚ್ ಹಿರಿಯ ಫಾದರ ಶಾಂತಪ್ಪ ಅಂಕಲಗಿ, ಪಾನ್ಸಿಸ್‌ ಪ್ರಮೋದ, ರೆ.ಟಿ. ಥಾಮಸ್ಸ್‌ ಸೇರಿದಂತ ಕ್ರೈಸ್ತ ಸಮಾಜದ ಫಾದರ್‌ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!