ನೇಣು ಬಿಗಿದುಕೊಂಡು ಪಿಎಸ್ಐ ಆತ್ಮಹತ್ಯೆ
ಕಲಬುರಗಿ : ನೇಣು ಬಿಗಿದುಕೊಂಡು ಪಿಎಸ್ಐ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದ ಗಂಗಾ ನಗರದಲ್ಲಿ ನಡೆದಿದೆ.
ಕಲಬುರಗಿ ಡಿಸಿಆರ್ಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಹೆರೂರ್ ಮೃತ ದುರ್ದೈವಿ. 2014ರ ಬ್ಯಾಚ್ನ ಪಿಎಸ್ಐ ಆಗಿದ್ದ ಮೃತ ಬಸವರಾಜ್ ಕಳೆದ ಎರಡು ವರ್ಷಗಳಿಂದ ಕಲಬುರಗಿಯ ಡಿ.ಸಿ.ಆರ್.ಬಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳವಾರ ತಡರಾತ್ರಿ ಅವರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಪಿಎಸ್ಐ ಬಸವರಾಜ್ ಅವರಿಂದ ಕರೆ ಬರುತ್ತಿದ್ದಂತೆ ಆತಂಕಗೊಂಡ ಸ್ನೇಹಿತರು ತಕ್ಷಣವೇ ಅವರ ತಂದೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಗಾಬರಿಗೊಂಡ ತಂದೆ ತಕ್ಷಣವೇ ಮಗನ ರೂಮಿನ ಬಳಿ ಧಾವಿಸಿ, ಒಳಗಿನಿಂದ ಲಾಕ್ ಆಗಿದ್ದ ಬಾಗಿಲನ್ನು ಒಡೆದು ತೆರೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಸವರಾಜ್ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.

