ರಾಯಬಾಗ : ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ..!
ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.
ಜ್ಯೋತಿ ಕಾಂಬಳೆ (23) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಹಣಮಂತ ಕಾಂಬಳೆ ಅವರೊಂದಿಗೆ ಜ್ಯೋತಿ ವಿವಾಹವಾಗಿದ್ದು, ಮದುವೆಯ ನಂತರ ಕೇವಲ ಮೂರು ದಿನಗಳಷ್ಟೇ ಗಂಡನ ಮನೆಯಲ್ಲಿ ವಾಸವಿದ್ದಳು.
ಗಂಡನ ಮನೆಯವರ ಕಾಟದ ಹಿನ್ನೆಲೆಯಲ್ಲಿ ಜ್ಯೋತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಸುಮಾರು ಎರಡು ವರ್ಷಗಳ ನಂತರ ಗಂಡನ ಮನೆಯವರು ಮತ್ತೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಗಂಡನ ಮನೆಗೆ ಹೋದ ಮೂರೇ ದಿನಗಳಲ್ಲಿ ಜ್ಯೋತಿ ಮೃತಪಟ್ಟಿರುವುದು ಕುಟುಂಬಸ್ಥರ ನಾನಾ ಅನುಮಾನಕ್ಕೆ ಕಾರಣವಾಗಿದೆ.
ಮೃತಳ ಕುಟುಂಬಸ್ಥರು ಗಂಡನ ಮನೆಯವರೇ ಹಲ್ಲೆ ನಡೆಸಿ ಕೊಲೆ ಮಾಡಿರಬಹುದೆಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


