ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ

ಬೆಳಗಾವಿ : ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮಾತ್ರವಲ್ಲ, ಸಮಾಜದ ಅಂತಃಕರಣವೂ ಹೌದು. ನೈಜತೆ, ವಾಸ್ತವ ಮತ್ತು ಧೈರ್ಯದೊಂದಿಗೆ ಸುದ್ದಿ ಬಿತ್ತರಿಸಿದಾಗಲೇ ಸಮಾಜದ ಎಳಿಗೆ ಸಾಧ್ಯ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.
ನಗರದ ವಾರ್ತಾ ಭವನದಲ್ಲಿ ಸೋಮವಾರ ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರು ಸಮಾಜದ ಸತ್ಯವನ್ನು ಜನರ ಮುಂದೆ ತರುವ ಕೆಲಸ ಮಾಡುತ್ತಾರೆ. ಬೆಳಗಾವಿಯ ಪತ್ರಕರ್ತರು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಹಾರೈಸಿದರು.
ಬೆಳಗಾವಿ ಮುದ್ರಣ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಉತ್ತರ ಕರ್ನಾಟಕದ ಸಮಾಜಮುಖಿ ಪತ್ರಿಕೋದ್ಯಮ ಸರಕಾರದ ಕಿವಿಗೆ ತಲುಪಬೇಕಿದೆ. ಮೇಲಾಗಿ ಉತ್ತರ ಕರ್ನಾಟಕದ ಪತ್ರಕರ್ತರ ಬವಣೆಯನ್ನು ಸರಕಾರದ ಗಮನ ಸೆಳೆಯುವ ಕೆಲಸವನ್ನು ಈ ಭಾಗದ ಜನಪ್ರತಿನಿಧಿಗಳು ಮಾಡಬೇಕು ಎಂದರು.
ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಸುಗಂಧಿ ಮಾತನಾಡಿ. ಉತ್ತರ ಕರ್ನಾಟದ ಪತ್ರಕರ್ತರು ಹಿಂಜರಿಯದೇ ಸರಕಾರಿ ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಕು. ಯುವ ಪತ್ರಕರ್ತರು ಹೆಚ್ಚಾಗಿ ಓದಬೇಕು. ಓದಿನ ಮೂಲಕವೇ ಬರವಣಿಗೆಯ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಗುರುರಾಜ ಜಮಖಂಡಿ, ಅಮಿತ ಉಪಾಧ್ಯೆ, ಸಂತೋಷ ಚಿನಗುಡಿ, ಸಂಜೀವ ಕಾಂಬಳೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರು ಹೃಷಿಕೇಶ್ ದೇಸಾಯಿ,ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ್ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ನೌಶಾದ್ ಬಿಜಾಪುರ, ಸಹ ಕಾರ್ಯದರ್ಶಿ ಸುರೇಶ್ ನೇರ್ಲಿ, ಸಂಜಯ ಸೂರ್ಯವಂಶಿ, ಮಂಜುನಾಥ ಕೊಳಿಗುಡ್ಡ, ಮಲ್ಲಿಕಾರ್ಜುನ ಬಾಳಗೌಡರ ಉಪಸ್ಥಿತರಿದ್ದರು. ರವಿ ಉಪ್ಪಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸನ್ಮಾನಿತರ ಪರಿಚಯವನ್ನು ಸಿದ್ದನಗೌಡ ಪಾಟೀಲ ವಾಚಿಸಿದರು, ಕೀರ್ತನಕುಮಾರಿ ಕಾರ್ಯಕ್ರಮ ನಿರೂಪಿಸಿದರು.

