ಕನ್ಹೇರಿ ಶ್ರೀಗಳಿಗೆ ನಿರ್ಬಂಧ ; ಕಾಂಗ್ರೆಸ್ ನಿಂದ ಧರ್ಮ ಒಡೆಯುವ ಕುತಂತ್ರ ; ಶೆಟ್ಟರ್ ಆಕ್ರೋಶ
ಬೆಳಗಾವಿ : ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಧರ್ಮ ಒಡೆಯುವ ಕುತಂತ್ರ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ಹೇರಿ ಮಠ್ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳಿಗೆ ಶಾಂತಿ ಕದಡುವವರು ಎಂಬ ಹಣೆಪಟ್ಟಿ ಕಟ್ಟಿ ವಿಜಯಪುರ ಪ್ರವೇಶ ನಿರ್ಬಂಧಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.
ಕನ್ಹೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಪ್ರತಿಕಾ ಪ್ರಕಟಣೆ ಹೊರಡಿಸಿದ ಇವರು. ಶ್ರೀಗಳು ಒಂದು ಜಾತಿಗೆ ಸೀಮಿತವಾಗಿದೆ ರಾಷ್ಟ್ರದ ಜನರ ಏಳ್ಗೆಯ ಕನಸು ಕಂಡವರು. ರಾಜ್ಯದ ರೈತಾಪಿ ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿರುವವರು. ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾದವರು. ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗೋ ರಕ್ಷಣೆ ಮಾಡುವವರಿಗೆ ರಾಜಕೀಯ ಲೇಪನ ಮಾಡುವುದು ಸರಿಯಲ್ಲ ಎಂದರು.
ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದ್ದು, ಹಿಂದೂ ಧರ್ಮವನ್ನು ಒಡೆಯುವ ಹಾಗೂ ಶಾಂತಿ ಕದಡುವ ಕೆಲಸವಾಗಿದೆ.ಶ್ರೀಗಳಿಗೆ ವಿಜಯಪುರ ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವ ಜಿಲ್ಲಾಡಳಿತದ ಕ್ರಮ ರಾಜಕೀಯ ಪ್ರೇರಿತ ನಡೆಯಾಗಿದೆ.
ಸದಾ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ನಡೆ ಸರಿಯಲ್ಲ, ಉತ್ತಮ ವಿಚಾರಗಳನ್ನು ಹೊಂದಿರುವ ಸಾಧು ಸಂತರಿಂದ ಸಮಾಜಕ್ಕೆ ಒಳ್ಳೆಯದೇ ಆಗುತ್ತದೆ, ಸರ್ಕಾರವು ಈಗಿಂದೀಗಲೇ ಈ ಆದೇಶ ಹಿಂಪಡೆಯಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.


