ಬೆಳಗಾವಿ : ಮಹಿಳೆಯನ್ನು ವಂಚಿಸಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣ ಹಾಗೂ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯ ಮಾಂಗಲ್ಯ ಸರ ಎಗರಿಸಿದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಹಾರೂಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ತಾಲೂಕಿನ ಹಿಡಕಲ್ ಗ್ರಾಮದ ರುಕ್ಮವ್ವ ಕಾಂಬಳೆ ಎಂಬುವವರಿಗೆ ನಿನ್ನ ಬ್ಯಾಂಕ್ ಖಾತೆಗೆ 40 ಸಾವಿರ ರೂ. ಹಣ ಜಮೆ ಆಗಿದ್ದು ಅಳಗವಾಡಿಗೆ ಬ್ಯಾಂಕಿಗೆ ಹೋಗಿ ತಗೆದುಕೊಡುವುದಾಗಿ ವ್ಯಕ್ತಿ ನಂಬಿಸಿದ್ದ. ನಂತರ ಹಿಡಕಲ್ ಹೊರವಲಯದ ವರೆಗೆ ಕರೆದೊಯ್ದು ಮಹಿಳೆ ಕೊರಳಲ್ಲಿ ಇದ್ದ ಚಿನ್ನದ ಬೊರಮಾಳ ಸರ ತಗೆದು ಕೊಡು, ಅದು ಇದ್ದರೆ ಹಣ ಸಿಗುವುದಿಲ್ಲ ಎಂದು ನಂಬಿಸಿ ಚಿನ್ನ ಎಗರಿಸಿ ಆರೋಪಿ ಪರಾರಿಯಾಗಿದ್ದ.
ಈ ಕುರಿತು ಮಹಿಳೆ ಜೂನ್. 1 ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಕೊಲ್ಹಾಪುರ ಮೂಲದ ದಸ್ತಗಿರ ಶೇಖ್ ಎಂಬಾತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತ ಈ ಹಿಂದೆ ಎಂಟು ಕಡೆಗಳಲ್ಲಿ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.
ಆರೋಪಿಯಿಂದ ಏಳು ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರತನಕುಮಾರ ಜೀರಗ್ಯಾಳ ನೇತೃತ್ವದಲ್ಲಿ ಪಿಎಸ್ಐ ಗಳಾದ
ಮಾಳಪ್ಪ ಪೂಜಾರಿ, ಶಿವಾನಂದ ಕಾರಜೋಳ, ಸಿಬ್ಬಂದಿಗಳಾದ ಬಿ. ಎಲ್. ಹೊಸಟ್ಟಿ. ರಮೇಶ ಮುಂದಿನಮನಿ. ಎ. ಎಸ್. ಶಾಂಡಗೆ. ಎಚ್. ಆರ್.
ಅಂಬಿ. ಪಿ. ಎಮ್. ಸಪ್ತಸಾಗರ, ವಿನೋದ ಠಕ್ಕಣ್ಣವರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಬೆಳಗಾವಿ ಶಹಾಪುರ ನಿವಾಸಿ ಪದ್ಮಾವತಿ ಕುಡಚಿ ಎಂಬುವವರು ಕಳೆದ ವರ್ಷ ಅಕ್ಟೋಬರ್ 16 ರಂದು ಹಾರೂಗೇರಿ ಮಾರ್ಗವಾಗಿ ಸರಕಾರಿ ಬಸ್ ನಲ್ಲಿ ಸಂಚರಿಸುವ ವೇಳೆ ಚಿನ್ನದ ತಾಳಿ ಕಳುವಾಗಿದೆ ಎಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಮೂಲ ಕುಶಪ್ಪ ತಳವಾರ ಎಂಬ ಆರೋಪಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎರಡೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳ ಕಾರ್ಯಕ್ಕೆ, ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್, ಹೆಚ್ಚುವರಿ ಎಸ್ಪಿ, ಶೃತಿ ಎನ್ ಎಸ್ ಹಾಗೂ ಅಥಣಿ ಉಪವಿಭಾಗ ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಿನ್ನದ ಸರ ಎಗರಿಸಿದ್ದ ಕಳ್ಳನ ಹೆಡೆಮುರಿ ಕಟ್ಟಿದ ಹಾರೂಗೇರಿ ಪೊಲೀಸ್ ; ಇಬ್ಬರು ಖದೀಮರು ಅಂದರ್



