ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ
ಬೆಳಗಾವಿ : ಕೃಷ್ಣಾ ನದಿ ತೀರದಲ್ಲಿರುವ ಗ್ರಾಮ ಸಪ್ತಸಾಗರ, ಐತಿಹಾಸಿಕ ಹಿನ್ನಲೆಯನ್ನು ತನ್ನ ಒಡಲೊಳಗಿಟ್ಟುಕೊಂಡಿರುವ ಈ ಊರಿನಲ್ಲಿ ಸಧ್ಯ ಹಾವೇರಿಯ ಹುಕ್ಕೇರಿಮಠದ ಶಿವಬಸವ ಅಜ್ಜನ ಜಾತ್ರೆ ಜಾತಿ, ಮತಗಳನ್ನು ಮೀರಿ ಅದ್ಧೂರಿಯಾಗಿ ನೆರವೇರುತ್ತಿರುವುದು ವಿಶೇಷ.
ಹೌದು ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಜನಿಸಿದ್ದ ಶಿವಬಸವ ಶಿವಯೋಗಿಗಳು ನಂತರ ಹಾವೇರಿ ಹುಕ್ಕೇರಿ ಮಠದಿಂದಲೇ ತಮ್ಮ ಆಧ್ಯಾತ್ಮಿಕ ದಾರಿಯನ್ನು ಬದುಕಿನುದ್ದಕ್ಕೂ ಸವೆಸಿದವರು. ಇಂತಹ ಮಹಾನ್ ಪೂಜ್ಯರ ಹುಟ್ಟೂರಿನಲ್ಲಿ ಮಂದಿರ ನಿರ್ಮಾಣದ ಕನಸು ಹೊತ್ತ ಹಾವೇರಿ ಹುಕ್ಕೇರಿ ಮಠದ ಇಂದಿನ ಪೀಠಾಧಿಪತಿ ಸದಾಶಿವ ಮಹಾಸ್ವಾಮಿಜಿ ಮಹತ್ವದ ಕಾರ್ಯಕ್ಕೆ ಮುಂದಾದರು.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶಿವಬಸವ ಗುರುಮಂದಿರ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ಅದ್ಧೂರಿಯಾಗಿ ಜರುಗಿತು. ಶಿವಬಸವ ಶ್ರೀಗಳ ಮೂರ್ತಿ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ಗುರುಮಾತೆಯರಿಂದ ಶಿವಬಸವ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಜರುಗಿತು.
ಮಧ್ಯಾಹ್ನ ಜರುಗಿದ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಹಾವೇರಿಯ ಹುಕ್ಕೇರಿ ಮಠದಿಂದ ಆಗಮಸಿದ ಭಕ್ತರು ಶಿವಬಸವ ಶ್ರೀಗಳ ಗದ್ದುಗೆ ಅಶಿರ್ವಾದ ಪಡೆದರು.
ಐದು ದಿನಗಳ ವರೆಗೆ ನಡೆದ ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ಸಿನ ಕುರಿತು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.
***************
ಸರ್ವಧರ್ಮಿಯರಿಂದ ಪ್ರಸಾದ ಸೇವೆ
ಹಳ್ಳಿಗಳಲ್ಲಿ ಭಾವೈಕ್ಯತೆ ಎಂಬುದು ನಿರಂತರವಾಗಿ ನದಿಯಂತೆ ಹರಿಯುತ್ತದೆ ಎಂಬುದಕ್ಕೆ ಸಪ್ತಸಾಗರ ಗ್ರಾಮವೇ ಸಾಕ್ಷಿ. ಗ್ರಾಮದ ಹಿಂದೂ, ಮುಸ್ಲಿಂ, ಜೈ ಸಮುದಾಯದ ಜನರು ಸೇರಿಕೊಂಡು ಶಿವಬಸವ ಶಿವಯೋಗಿಗಳ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿದಿನ ಸಂಜೆ ಪ್ರವಚನಕ್ಕೆ ಬರುವ ಭಕ್ತರಿಗೆ ಎಲ್ಲಾ ಸಮುದಾಯದ ವತಿಯಿಂದ ಒಂದೊಂದು ದಿನ ಪ್ರಸಾದ ಸೇವೆ ಮಾಡುವ ಮೂಲಕ ಜನ ಭಾವೈಕ್ಯತೆ ಸಾರಿದ್ದಾರೆ.


