ಹುಬ್ಬಳ್ಳಿ : ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಮುರಿಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮಂಟೂರ ರಸ್ತೆಯ ಅಕ್ಕಪಕ್ಕ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್ ಅಳವಡಿಸಲಾಗಿತ್ತು.

ಸಿಎಂ ಮತ್ತು ಸಚಿವ ಜಮೀರ್ ಅವರ ಕಟೌಟ್‌ಗಳು ಮುರಿದು ಬಿದ್ದು ಅದರ ಕೆಳಗಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಯಗೊಂಡವರಲ್ಲಿ ಓರ್ವ ಮಹಿಳೆಯನ್ನ ಶಾರದಾ ಕ್ಯಾರಕಟ್ಟಿ ಎಂದು ಗುರುತಿಸಲಾಗಿದೆ. ಶಾರದಾ ಹುಬ್ಬಳ್ಳಿ ಗಂಗಾಧರ ನಗರದ ಸೆಟಲ್‌ಮೆಂಟ್‌ ಬಡಾವಣೆಯ ಮಹಿಳೆ, ಮನೆ ಕೇಳಲೆಂದು ಮಗ ಶಶಿಕಾಂತ ಕ್ಯಾರಕಟ್ಟಿ ಜೊತೆಗೆ ಬಂದಿದ್ದರು. ಕಟೌಟ್‌ ಬೀಳುತ್ತಿದ್ದ ವೇಳೆ ಮಗ ಶಶಿಕಾಂತ್‌ ತಪ್ಪಿಸಿಕೊಂಡಿದ್ದಾನೆ. ತಾಯಿಗೆ ಕಟೌಟ್‌ ತಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.