2 ಮಕ್ಕಳ ಬಿಟ್ಟು ಯುವಕನ ಜೊತೆ ಆಂಟಿ ಎಸ್ಕೇಪ್ ; ಪತಿರಾಯ ಮಾಡಿದ್ದೇನು….?
ಬೆಳಗಾವಿ : ಯುವಕನ ಜೊತೆ ವಿವಾಹಿತ ಮಹಿಳೆ ಓಡಿಹೋದ ಕಾರಣಕ್ಕೆ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆಯನ್ನು ಧ್ವಂಸಗೊಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದಲ್ಲಿ ನಡೆದಿದೆ
ತಾಲೂಕಿನ ಜಿನರಾಳ ಗ್ರಾಮದ ಯುವಕ ಲಗಮಣ್ಣ ವಾಲಿಕಾರ್ ಎಂಬಾತ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣ ಇಬ್ಬರು ಮನೆ ಬಿಟ್ಟು ಮಂಗಳವಾರ ಓಡಿ ಹೋಗಿದ್ದಾರೆ. ಇಬ್ಬರು ಮಕ್ಕಳನ್ನು ಬಿಟ್ಟು ವಿವಾಹಿತ ಮಹಿಳೆ ಓಡಿ ಹೋಗಿದ್ದಕ್ಕೆ ಆಕ್ರೋಶಗೊಂಡ ಆಕೆಯ ಗಂಡ ಯುವಕ ಲಗಮಣ್ಣ ವಾಲಿಕಾರ್ ತಾಯಿ ವಾಸವಿದ್ದ ಮನೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ.
ವಿವಾಹಿತ ಮಹಿಳೆಯ ಪತಿ ಸೇರಿದಂತೆ 10 ಕ್ಕೂ ಅಧಿಕ ಜನರಿದ್ದ ಗುಂಪು ಏಕಾಏಕಿ ಶಾಂತವ್ವಾ ವಾಲಿಕಾರ್ ವಾಸವಿದ್ದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಒಳಗಿನ ವಸ್ತುವನ್ನು ಹಾಳು ಮಾಡಿದ್ದು ಕಲ್ಲೂ ತೂರಾಟ ನಡೆಸಿದ್ದಾರೆ. ಇದರಿಂದ ದಿನಬಳಕೆ ವಸ್ತುಗಳು ಹಾಳಾಗಿದ್ದು ಮಗ ಮಾಡಿದ ತಪ್ಪಿಗೆ ಮಹಿಳೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಂತ್ರಸ್ತ ಮಹಿಳೆ, ನನ್ನ ಮಗನ ವಿಚಾರಕ್ಕೆ ಮಂಗಳವಾರ ಸಂಜೆ ಊರಿನ ಹಿರಿಯ ಮುಂದೆ ಸಂಧಾನ ಮಾಡಲಾಗಿತ್ತು. ಆತ ಮಾಡಿರುವ ತಪ್ಪಿಗೆ ಯಾವ ಶಿಕ್ಷೇ ಬೇಕಾದರು ಕೊಡಿ ಎಂದು ಮನವಿ ಮಾಡಿದ್ದೆ. ಆದರೆ ಏಕಾಏಕಿ ಮನೆ ಮೇಲೆ ದಾಳಿ ನಡೆದ ಕಾರಣ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಘಟನೆ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ 10 ಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


