ಬೆಳಗಾವಿಯಲ್ಲಿ ಡಿಕೆಶಿ ಏಕಾಂಗಿ ; ಡಿಸಿಎಂ ಹತ್ತಿರವು ಸುಳಿಯದ ಕಾಂಗ್ರೆಸ್ ಶಾಸಕರು
ಬೆಳಗಾವಿ : ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಮತ್ತೊಂದು ಹಂತ ಪಡೆದುಕೊಂಡಿದ್ದು, ಬುಧವಾರ ಬೆಳಗಾವಿಗೆ ಆಗಮಿಸಿದ್ದ ಡಿಕೆಶಿ ಏಕಾಂಗಿ ಓಡಾಟ ನಡೆಸಿದ್ದಾರೆ.
ಹೌದು ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ವಿಚಾರವಾಗಿ, ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಈ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಬುಧವಾರ ಬೆಳಗಾವಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕರೂ ಡಿಕೆಶಿ ಸ್ವಾಗತಕ್ಕೆ ಬರಲಿಲ್ಲ.
ಅಷ್ಟೇ ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಶಾಸಕರ ಬಳಗ ಇತ್ತ ಕಡೆ ಸುಳಿಯದೆ ಅಂತರ ಕಾಯ್ದುಕೊಂಡರು. ಈ ಎಲ್ಲಾ ಬೆಳವಣಿಗೆ ಗಮನಿಸಿದ್ದರು ಡಿಕೆಶಿ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲ ಹುಟ್ಟುಹಾಕಿದ್ದು ಸುಳ್ಳಲ್ಲ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಸ್ತಕ್ಷೇಪದ ವಿಚಾರ ಸಧ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಬಣ ರಾಜಕೀಯಕ್ಕೆ ಕಾರಣವಾಗಿದೆ. ವಿರೋಧಿ ಬಣದ ನಾಯಕರಿಗೆ ಉನ್ನತ ಹುದ್ದೇ ನೀಡುವ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುನಿಸು, ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣ ಗೋಚರಿಸುತ್ತಿದೆ.
ರಾಜ್ಯದ ರಾಜಕೀಯ ಒಂದುಕಡೆ ಇದ್ದರೆ, ಬೆಳಗಾವಿ ರಾಜಕಾರಣ ಯಾವತ್ತೂ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ಹಾಗೂ ಮನೆತನಗಳ ಪ್ರತಿಷ್ಠೆಗಳೇ ಪ್ರಮುಖವಾಗಿರುತ್ತವೆ.
ಆದರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ DK Shivakumar ಕೆಲ ವಿಚಾರವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಇದರಿಂದ ಸ್ವಪಕ್ಷೀಯ ಸಚಿವ ಸತೀಶ್ ಜಾರಕಿಹೊಳಿ Satish jarakiholi ಮುನಿಸಿಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ.
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿಯ ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ laxmi hebalkar ವಿರುದ್ಧ ಸತೀಶ್ ಜಾರಕಿಹೊಳಿ ಭಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ವಿಚಾರವಾಗಿ ಬೆಳಗಾವಿಯಲ್ಲಿ ಹಮ್ಮಿಕೊಳ್ಳಬೇಕಿದ್ದ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ಆಗಿದ್ದಕ್ಕೆ ಸಿದ್ದು ಹಾಗೂ ಡಿಕೆಶಿ ಬಣಗಳ ನಡುವಿನ ಗುದ್ದಾಟ ಮುಂದುವರಿದಿತ್ತು.
ಸಧ್ಯ ಡಿ.ಕೆ ಶಿವಕುಮಾರ್ ಟಕ್ಕರ್ ನೀಡುವಂತೆ ಬೆಳಗಾವಿ ರಾಜಕೀಯದಲ್ಲಿ ಮೂಗು ತೋರಿಸುತ್ತಿದ್ದು, ಇದರಿಂದ ಕೆರಳಿರುವ ಸತೀಶ್ ಜಾರಕಿಹೊಳಿ ಮರುತಂತ್ರ ಹೆಣೆಯಲು ಸಜ್ಜಾಗಿದ್ದಾರೆ.


