ಕೇವಲ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ ; ಮತ್ತೆ ಬರ್ತೀವಿ ಎಂದ ಶಾಸಕ ಯತ್ನಾಳ್
ವಿಜಯಪುರ : ರಾಜ್ಯ ರಾಜಕಾರಣದಲ್ಲಿ ಸದಾಕಾಲವೂ ಸುದ್ದಿಯಾಗುವ ವಿಜಯಪುರ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯ ನುಡಿದಿದ್ದು ಇನ್ನುಳಿದ ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಈಗಲೇ ಹಲವಾರು ಜನ ಸರ್ಕಾರದ ಪತನದ ಕುರಿತು ಮಾತನಾಡುತ್ತಿದ್ದಾರೆ. ಸಧ್ಯ ಯತ್ನಾಳ್ ಹೇಳಿಕೆ ಬಾರಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಸರ್ಕಾರದ ಪತನ ಕುರಿತು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವ ಶಾಸಕರಿಗೂ ಅನುದಾನ ನೀಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೇ ಹಣ ಚಾಚಿಕೊಳ್ಳುತ್ತಿದ್ದಾರೆ. ಇದರಿಂದ ಒಳಗೊಳಗೆ ಆಕ್ರೋಶ ಇದ್ದು ತಾನಾಗಿಯೇ ಸರ್ಕಾರ ಪತನ ಆಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಯಾರು ಏನೇ ಹೇಳಿದರು ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ವಿಜಯಪುರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.


