ಮಾನವೀಯತೆ ಮೆರೆದ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ; ಸಾರ್ವಜನಿಕರ ಮೆಚ್ಚುಗೆ
ಬೆಳಗಾವಿ : ಅಪಘಾತಕ್ಕೀಡಾದ ಗಾಯಾಳು ವ್ಯಕ್ತಿಯನ್ನು ತಮ್ಮ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಮಾನವೀಯತೆ ಮೆರೆದಿದ್ದಾರೆ.
ರಾಯಬಾಗ ತಾಲೂಕಿನ ಬೂದಿಹಾಳ ಕ್ರಾಸ್ ಬಳಿ ಸಂಜೆ ಪಾದಚಾರಿ ಒಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ರಾಯಬಾಗ ಪೊಲೀಸ್ ಠಾಣೆಯಿಂದ ಬೆಳಗಾವಿಗೆ ಬರುತ್ತಿದ್ದ ಎಸ್ಪಿ ಸಂಜೀವ್ ಪಾಟೀಲ್ ವಾಹನ ನಿಲ್ಲಿಸಿ ಗಾಯಾಳು ನೆರವಿಗೆ ಧಾವಿಸಿದ್ದಾರೆ.
ಅಪಘಾತವಾದ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಎಸ್ಪಿ ಗಾಯಾಳನ್ನು ಆರೈಕೆ ಮಾಡಿ, ರಾಯಬಾಗ ತಾಲೂಕಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.


