ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ಬಿಜೆಪಿ ಭ್ರಷ್ಟಾಚಾರ – ಪ್ರಿಯಾಂಕಾ ವಾಗ್ದಾಳಿ
ಖಾನಾಪುರ : ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿತ್ತು. ಮಕ್ಕಳಿಗೆ ಕೊಡುವ ಹೊಟ್ಟೆಯಲ್ಲಿ ಕೂಡಾ ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರರ ಸಂಘದ ಸದಸ್ಯರು ಪ್ರಧಾನಿ ಮೋದಿಗೆ ಪತ್ರ ಬರೆದರು ಉತ್ತರ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಭಾನುವಾರ ಖಾನಾಪುರ ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರಿಂದ ರಾಜ್ಯದ ಜನರಿಗೆ ಯಾವುದೇ ಉಪಯೋಗ ಆಗಿಲ್ಲ. ಶಾಲಾ ಮಕ್ಕಳಿಗೆ ಸರ್ಕಾರದಿಂದ ಕೊಡುವ ಮೊಟ್ಟೆಯನ್ನು ಬಿಟ್ಟಿಲ್ಲ ಎಂದು ಹರಿಹಾಯ್ದರು.

ಕರ್ನಾಟಕದಲ್ಲಿ ಸಂಸ್ಕೃತಿ, ಸಂಸ್ಕಾರವು ಎಲ್ಲವೂ ಇದೆ. ಪ್ರಕೃತಿಯ ಎಲ್ಲಾ ವಂಶಗಳು ರಾಜ್ಯದಲ್ಲಿ ಇವೆ. ಇಲ್ಲಿನ ಸರ್ಕಾರ ರಾಜ್ಯದ ಮಹತ್ವ ತಿಳಿದಿಲ್ಲ. ಜನರಿಗಾಗಿ ಕೆಲಸ ಮಾಡುವ ಸರ್ಕಾರ ಇರಬೇಕು. ಅಧಿಕಾರಕ್ಕೆ ಸಿಗುತ್ತಲೇ ನಮಗೆ ಗಳಿಸುತ್ತೇವೆ ಎನ್ನುವ ಭಾವನೆ ಕೆಲವರಿಗೆ ಬರುತ್ತದೆ. ಇಂತಹ ಭಾವನೆ ಇರೋ ಸರ್ಕಾರ ಕಳೆದ ಮೂರು ವರ್ಷ ಹಿಂದೆ ರಚನೆ ಆಗಿದೆ. ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯಿಂದ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಪರ್ಸಂಟೆಜ್ ಸರ್ಕಾರ ಎಂದೇ ಇದು ಗುರುತಿಸಿಕೊಂಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.
ರೈತರ ಎಲ್ಲಾ ವಸ್ತುಗಳ ಮೇಲೆ ಜಿಎಸ್ಟಿ, ಟ್ಯಾಕ್ಸ್ ಪರಿಣಾಮ ಬಿದ್ದಿದೆ. ಎಲ್ಲಾ ಹಂತದಲ್ಲಿ ರೈತರು, ಮಹಿಳೆಯರಿಗೆ ಮೋಸ ಆಗಿದೆ. 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ತುಂಬಿಕೊಳ್ಳುವ ಕೆಲಸ ಸರ್ಕಾರ ಮಾಡಿಲ್ಲ. ನೋಟ್ ಬ್ಯಾನ್, ಜಿಎಸ್ಟಿಯಿಂದ ಸಾಕಷ್ಟು ಸಮಸ್ಯೆ ಆಗಿದೆ. ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ಆಗಿದೆ. ಶಾಸಕನ ಪುತ್ರರ ಬಳಿ 8 ಕೋಟಿ ಸಿಕ್ಕರೂ ಯಾವುದೇ ಶಿಕ್ಷೆ ಆಗಿಲ್ಲ.
ಗುತ್ತಿಗೆದಾರ ಸಂಘದಿಂದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರೆ ಯಾವುದೇ ಕ್ರಮ ಆಗಿಲ್ಲ. ಐದು ವರ್ಷ ಇದೇ ಸರ್ಕಾರ ಇರಬೇಕೋ ಬದಲಾವಣೆ ಮಾಡಬೇಕು ಎಂದು ನೀವು ನಿರ್ಧಾರ ಮಾಡಬೇಕು ಎಂದು ಹೇಳಿದರು.


