ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅನಾಮಧೇಯ ವ್ಯಕ್ತಿಯೊಬ್ಬರ ಜೊತೆ ನಡೆಸಿರುವ ಆಡಿಯೋ ಸಂಭಾಷಣೆ ಭಾರೀ ವಿವಾದ ಸೃಷ್ಟಿಸಿದೆ.

ಕೇಂದ್ರದ ಪ್ರಮುಖ ವ್ಯಕ್ತಿಯೊಬ್ಬರ ಜೊತೆ ಸುಮಾರು 3 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತನಾಡಿರುವ ಈ ಆಡಿಯೋ ವೈರಲ್ಲಾಗಿದ್ದು, ಪಕ್ಷದಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಿತೂರಿ ನಡೆಯುತ್ತಿದೆ ಎಂಬುದಕ್ಕೆ ಇದು ಪುಷ್ಟಿ ಒದಗಿಸಿದೆ.

ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕಿತ್ತು ಹಾಕಿ ಜೂನ್‌, ಜುಲೈ, ಆಗಸ್ಟ್‌ ತಿಂಗಳು ಮುಗಿದ ನಂತರ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿಯಲಿದೆ. ಅಲ್ಲಿಯ ತನಕ ಕಾದು ಬಿವೈವಿ ಅವರನ್ನು ಕಿಕ್‌ ಔಟ್‌ ಮಾಡಿ ಎಂದು ಡಿವಿಎಸ್‌‍ ಮಾತನಾಡಿದ್ದಾರೆ.

ಎರಡು ತಿಂಗಳು ನಾವು ಕಾಯೋಣ. ನವೆಂಬರ್‌ಗೆ ಹೇಗಿದ್ದರೂ ವಿಜಯೇಂದ್ರ ಅವಧಿ ಮುಗಿಯಲಿದೆ. ಅವರು ಕಿಕ್‌ ಔಟ್‌ ಆದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಲಿದೆ. ಅನಗತ್ಯವಾಗಿ ಇದು ನಾವೇಕೆ ಗೊಂದಲ ಸೃಷ್ಟಿಸಿಕೊಳ್ಳೋಣ. ಹೈಕಮಾಂಡ್‌ ನಾಯಕರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಂದು ಹೇಳಿದ್ದಾರೆ.