ಚನ್ನಮ್ಮನ ಕಿತ್ತೂರು: ತವರು ಮನೆಗೆ ಹೊರಟಿದ್ದಾಳೆಂಬ ಕೋಪದಿಂದ ಪತಿ ಕೊಡಲಿಯಿಂದ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ್ದು, ಈ ಪಶ್ಚಾತ್ತಾಪ ಭಾವದಿಂದ ಪತಿಯೂ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಶುಕ್ರವಾರ ಕಿತ್ತೂರು ಠಾಣಾ ವ್ಯಾಪ್ತಿಯ ತುರಕರಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯಲ್ಲವ್ವ ಶಿವಪ್ಪ ಕಂಬಳಿ (43) ಕೊಲೆಯಾದ ಗೃಹಿಣಿ. ಶಿವಪ್ಪ ಸಣ್ಣಬಸಪ್ಪ ಕಂಬಳಿ (52) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ತವರು ಮನೆಗೆ ಪತ್ನಿಯನ್ನು ಕಳುಹಿಸುತ್ತಿರಲಿಲ್ಲ. ವಾರದ ಹಿಂದೆ ಪತ್ನಿಯ ತಾಯಿ ತೀರಿಕೊಂಡಿದ್ದಳು. ಇದೇ ಕೊರಗಿನಲ್ಲಿದ್ದ ಯಲ್ಲವ್ವ ಅಡುಗೆ ಕಟ್ಟಿಕೊಂಡು ತವರು ಮನೆಗೆ ಹೊರಡಲು ಶುಕ್ರವಾರ ಸಿದ್ಧವಾಗಿದ್ದಳು. ಈ ಸುದ್ದಿ ಅರಿತ ಪತಿ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಪತ್ನಿ ಸಾವಿಗೀಡಾದಳು. ಅನಂತರ ಮನೆಯಲ್ಲಿಯೇ ಪತಿ ಶಿವಪ್ಪ ನೇಣಿಗೆ ಶರಣಾದ ಎಂದು ಪೊಲೀಸರು ಮಾಹಿತಿ ನೀಡಿದರು.

ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಶವಗಳನ್ನು ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಯಿತು. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.