ಆಂದ್ರಪ್ರದೇಶದ : ಕರ್ನೂಲ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ ಖಾಸಗಿ ಬಸ್‌ಗೆ ಬೆಂಕಿ ತಗುಲಿ ಹೊತ್ತಿ ಉರಿದ ಘೋರ ದುರಂತದಲ್ಲಿ 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಮುರಿ ಕಾವೇರಿ ಟ್ರಾವೆಲ್ಸ್ ಬಸ್ನಲ್ಲಿ ಬೆಂಕಿಗೆ ಆಹುತಿಯಾಗಿ, 20 ಜನರು ಸಾವನ್ನಪ್ಪಿದ್ದಾರೆ. 20 ಜನರ ಮೃತದೇಹಗಳನ್ನು ಹೊರತೆಗೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಜಾನೆ 3.30ರ ಸುಮಾರಿಗೆ ಕರ್ನೂಲ್ ಉಪನಗರ ಚಿನ್ನಾಟಕೂರಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅವಘಡ ನಡೆದಿದೆ. ಬಸ್ಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು, ಬಸ್ಸಿನ ಕೆಳಗೆ ಸಿಕ್ಕಿಕೊಂಡಿದೆ.

ಇದರಿಂದಾಗಿ ಬಸ್ನ ಇಂಧನ ಟ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ವೇಗವಾಗಿ ಬೆಂಕಿ ವ್ಯಾಪಿಸಿದ ಕಾರಣ ಹಲವರು ಪ್ರಾಣ ಕಳೆದುಕೊಂಡರು ಎಂಬ ಮಾಹಿತಿ ದೊರೆತಿದೆ.

ಒಂದೇ ಕುಟುಂಬದ ನಾಲ್ವರು ಸಾವು : ಈ ಅವಘಡದಲ್ಲಿ ನೆಲ್ಲೂರು ಜಿಲ್ಲೆಯ ಮಿಂಜಾಮುರ್ ಮಂಡಲದ ಗೊಲ್ಲವರಿಪಲ್ಲಿಯ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೂಡಾ ಸಾವನ್ನಪ್ಪಿದ್ದಾರೆ. ಗೊಲ್ಲ ರಮೇಶ್, ಇವರ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ವಿಂಜಾಮೂರ್ ಮಂಡಲದ ಗೊಲ್ಲವರಿಪಳ್ಳಿಯ ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಮತ್ತು ಮನೀಶ್ (12) ಸಾವನ್ನಪ್ಪಿದವರು. ರಮೇಶ್ ಕಳೆದ 15 ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕಂಪನಿಯ ಪ್ರವಾಸದ ಭಾಗವಾಗಿ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ಗೆ ಬಂದಿದ್ದರು.
ಹಿಂದಿರುಗುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.