ಹೋಗಿದ್ದು 85, ಉಳಿದಿದ್ದು 58, ಹೇಳಿದ್ದು 75…ನಿಪ್ಪಾಣಿ ಆಟ ಬಲ್ಲವರು ಯಾರು…?
ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ನಿಪ್ಪಾಣಿ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಗೆಲುವು ಸಾಧಿಸಲು ತಮ್ಮ ಕಸರತ್ತು ಮುಂದುವರಿಸಿದ್ದಾರೆ. ತಮ್ಮ ಬೆಂಬಲಿತ ಪಿಕೆಪಿಎಸ್ ಸದಸ್ಯರ ಜೊತೆ ರೆಸಾರ್ಟ್ ಅಸ್ತವ್ಯ ಮುಂದುವರಿಸಿದ್ದಾರೆ.
ಈ ಕುರಿತು ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ಜೊಲ್ಲೆ ಬಣ ನಮ್ಮ ಜೊತೆ 75 ಸದಸ್ಯರು ಇದ್ದಾರೆ ಎಂದು ಹೇಳುವ ಮೂಲಕ ಗೆಲುವಿನ ವಿಶ್ವಾಸ ಹೊರಹಾಕಿದ್ದಾರೆ. ಆದರೆ ಗೆಲ್ಲಲು ಬೇಕಾದ ಸದಸ್ಯರ ಸಂಖ್ಯೆ ಅವರ ಬಳಿ ಇದೆಯಾ ಎಂಬ ಅನುಮಾನವನ್ನು ವಿರೋಧಿ ಪಾಳೆಯ ಹೊರಹಾಕಿದೆ.
ಮೂಲಗಳ ಪ್ರಕಾರ ಜೊಲ್ಲೆ ಬಣದಲ್ಲಿ ಮೊದಲು ರೆಸಾರ್ಟ್ ತಲುಪಿದ್ದವರು 85 ಸದಸ್ಯರು. ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಮರಳಿದವರು ಸುಮಾರು 11 ಕ್ಕೂ ಅಧಿಕ ಸದಸ್ಯರು. ಆದರೆ ಜೊಲ್ಲೆ ಪಾಳೆಯದಲ್ಲಿ ಅರವತ್ತರ ಸಮೀಪ ಎಂದು ಹೇಳಲಾಗುತ್ತಿದೆ.
119 ಸದಸ್ಯ ಬಲದ ನಿಪ್ಪಾಣಿ ಕ್ಷೇತ್ರದಿಂದ ಜೊಲ್ಲೆ ಹಾಗೂ ಉತ್ತಮ ಪಾಟೀಲ ನಡುವೆ ಸಮಬಲದ ಹೋರಾಟ ಮುಂದುವರಿದಿದೆ. ಈ ನಡುವೆ ಎರಡೂ ಬಣದವರಿಂದ ಅಡ್ಡ ಮತದಾನದ ಭೀತಿಯೂ ಇದೆ. ಕೊನೆ ಕ್ಷಣದಲ್ಲಿ ಫಲಿತಾಂಶದ ದಿಕ್ಕು ಬದಲಾಗುವ ಸಾಧ್ಯತೆಯೂ ಇದೆ.
ಕತ್ತಿ ಮಾತಿನ ಮರ್ಮವೇನು….? ನೀವು ನಮ್ಮ ಜನರನ್ನು ಹೈಜಾಕ್ ಮಾಡಬಹುದು ಆದರೆ ಮತಗಳನ್ನಲ್ಲ ಎಂಬ ರಮೇಶ್ ಕತ್ತಿ ಹೇಳಿಕೆ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಮತದಾನದ ವೇಳೆ ಜೊಲ್ಲೆ ಕ್ಯಾಂಪಿನ ಸದಸ್ಯರು ಮನಸ್ಸು ಬದಲಿಸಬಹುದು ಎಂಬ ಅರ್ಥದಲ್ಲಿ ಕತ್ತಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಏನೇ ಇದ್ದರು ಚುನಾವಣಾ ಫಲಿತಾಂಶದ ನಂತರವೇ ಯಾರ ಕೈ ಮೇಲು ಎಂಬುದು ಸ್ಪಷ್ಟವಾಗಲಿದೆ.


