ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ‌ಬಿ.ಆರ್ ಗವಾಯಿ ಅವರ ಮೇಲೆ ಕೋರ್ಟ್ ಹಾಲ್ ನಲ್ಲೇ ಶೂ ಎಸೆಯಲು ಮುಂದಾದ ವಕೀಲನನ್ನು ವಜಾಗೊಳಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.

ದೇಶದ ಅತ್ಯುನ್ನತ ನ್ಯಾಯಾಂಗ ‌ಕಚೇರಿಗೆ ದಕ್ಕೆ ತಂದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ಅಭ್ಯಾಸದಿಂದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಜಾಗೊಳಿಸಿದೆ. 

ಏನಿದು ಘಟನೆ : ಸೋಮವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಕೋರ್ಟ್ ರೂಂ ನಂ.1ರಲ್ಲಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ಗಲಾಟೆ ಮಾಡಿದ್ದು, ವೇದಿಕೆಯ ಬಳಿಗೆ ಬಂದು ತಮ್ಮ ಶೂ ತೆಗೆದು ಮುಖ್ಯ ನ್ಯಾಯಮೂರ್ತಿಯತ್ತ ಎಸೆಯಲು ಪ್ರಯತ್ನಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಅವರನ್ನು ಬಂಧಿಸುತ್ತಿದ್ದಂತೆ, ಸನಾತನ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಕಿಶೋರ್ ಕೂಗುವುದು ಕೇಳಿಸಿತು. ತಕ್ಷಣ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಕ್ಕೆ ಕರೆದೊಯ್ದು ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಲಾಯಿತು.

ಅಡೆತಡೆಗಳ ಹೊರತಾಗಿಯೂ, ಸಿಜೆಐ ಗವಾಯಿ ದಿನದ ಕಲಾಪವನ್ನು ಮುಂದುವರೆಸಿದರು. “ಇದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದರು.