ರಾಜ್ಯದಲ್ಲೇ ಮೊದಲ ಕಾಗದ ರಹಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಎಲ್ಇ
ಬೆಳಗಾವಿ : ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುವ ಕೆಎಲ್ಇ ಆಸ್ಪತ್ರೆ ಸಂಪೂರ್ಣ ಕಾಗದ ರಹಿತ ವ್ಯವಹಾರಕ್ಕೆ ಮಾರ್ಪಟ್ಟಿದ್ದು ರಾಜ್ಯದಲ್ಲೇ ಮೊದಲ ಕಾಗದ ರಹಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೆಎಲ್ಇ ವೈದ್ಯಕೀಯ ನಿರ್ದೇಶಕ ಡಾ. ಕರ್ನಲ್ ಎಂ. ದಯಾನಂದ ಹೇಳಿದರು.
ಮಂಗಳವಾರ ನಗರದ ಕೆಎಲ್ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಕೆಎಲ್ಇ ಆಸ್ಪತ್ರೆಯು ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ರೋಗಿಗಳ ಸೇವೆ ಮಾಡುತ್ತಿದೆ. ಇದೇ ಉದ್ದೇಶದಿಂದ ಆಸ್ಪತ್ರೆಯ ಎಲ್ಲಾ ವೈದ್ಯಕೀಯ, ಆಡಳಿತಾತ್ಮಕ ಕಾರ್ಯಚಟುವಟಿಕೆಯನ್ನು ಡಿಜಿಟಲಿಕರಣ ಮಾಡುವ ಉದ್ದೇಶದಿಂದ ಕಾಗದ ರಹಿತ ಆಸ್ಪತ್ರೆಯಾಗಿ ಬದಲಾಗಿದೆ ಎಂದರು.
ಮುಂಬೈ ಮೂಲದ ಪ್ರೆಸ್ಕೊ ಪೇಪೆರ ಲೆಸ್ ಸೊಲ್ಯೂಷನ್ಸ್ ಕಂಪನಿಯ ಸಹಕಾರದಿಂದಆಸ್ಪತ್ರಗೆ ದಾಖಲಾಗುವ ರೋಗಿಗಳ ರೋಗ ನಿರ್ಧಾರ, ಟೆಸ್ಟ್, ಔಷಧಿ ಹಾಗೂ ಉಪಚಾರಗಳ ಮಾಹಿತಿ ತಂತ್ರಜ್ಞಾನದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಬದಲಾಗುತ್ತಿರುವ ಅಧುನಿಕ ದಿನಗಳಲ್ಲಿ ಕಾಗದ ರಹಿತ ವ್ಯವಹಾರ ಮಾಡುವುದು ಅನಿವಾರ್ಯವಿತ್ತು. ಇದನ್ನು ಮನಗಂಡ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು ಕಾಗದ ರಹಿತ ವ್ಯಹವಾರ ಅನುವು ಮಾಡಿಕೊಟ್ಟಿದ್ದು, ರಾಜ್ಯದಲ್ಲೇ ಈಗ ಕೆಎಲ್ಇ ಆಸ್ಪತ್ರೆ ಕಾಗದ ರಹಿತ ವ್ಯವಹಾರ ನಡೆಸುತ್ತಿದೆ ಎಂದರು.
ಆಸ್ಪತ್ರೆಗೆ ದಾಖಲಾದ ರೋಗಿಗೆ ಪಡೆದ ಚಿಕಿತ್ಸೆ ವಿವರವನ್ನು ಸಂಪೂರ್ಣವಾಗಿ ಡಿಜಿಟಲಿಕರಣ ಗೊಳಿಸಲಾಗುತ್ತದೆ. ಎಷ್ಟೇ ವರ್ಷ ಕಳೆದರೂ ರೋಗಿ ಆಸ್ಪತ್ರೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇನ್ನೂ ಚಿಕಿತ್ಸೆ ಸಂಪೂರ್ಣ ವಿವರಗಳನ್ನು ಒಳಗೊಂಡ ದಾಖಲೆಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಅನುಗುಣವಾಗಿ ಆಸ್ಪತ್ರೆ ಯೋಜನೆ ಅಳವಡಿಸಿಕೊಂಡಿದೆ. ಭಾರತೀಯ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆಯೊಂದಿಗೆ ಮಾಹಿತಿ ಗೌಪ್ಯತೆ ಮತ್ತು ಸೈಬರ್ ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂದರು.
ನ್ಯೂರಾಲಬಿಟ್ಸ್ ಟೆಕ್ನಾಲಜೀಸ್ ನ ಸಹ ಸಂಸ್ಥಾಪಕ ಹಾಗೂ ಪ್ರೆಸ್ಕೊ ಅಭಿವೃದ್ಧಿ ಪಡಿಸಿದ ವಿಕ್ರಮ್ ದೋತ್ರೆ ಮಾತನಾಡಿ, ಇದು ಪರಿಸರ ಸ್ನೇಹಿಯೂ ಹೌದು ಹಾಗೂ ರೋಗಿಗಳಿಗೂ ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯಸಿಬ್ಬಂಧಿ ಸ್ನೇಹಿಯೂ ಹೌದು ಇದರಿಂದ ಪರಿಸರದ ಮೇಲೆ ಆಗುತ್ತಿರುವ ತೊಂದರೆಯನ್ನು ತಡೆಯಬಹುದು. ಇದು ಯಾವುದೇ ಕಾರಣಕ್ಕೂ ದುರ್ಬಳಕೆ ಆಗುವುದಿಲ್ಲ ಎಂದರು. ಅಲ್ಲದೆ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಮಾಡುವ ಸಂದರ್ಭದಲ್ಲೂ ಸಹ ತೆಗೆದುಕೊಳ್ಳುವ ಬಹುತೇಕ ಸಮಯವನ್ನೂ ಸಹ ಇದರಿಂದ ಉಳಿತಾಯ ಆಗುತ್ತದೆ ಎಂದರು.ಅಲ್ಲದೆ ಪ್ರಿಟಿಂಗ್, ಝೇರಾಕ್ಸ್ ಸೇರಿದಂತೆ ವಿವಿಧ ಖರ್ಚುಗಳೂ ಸಹ ಉಳಿತಾಯ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡೈರೆಕ್ಟರ್,ಕ್ಲಿನಿಕಲ್ ಸರ್ವಿಸಸ್ ಡಾ. ಮಾಧವ ಪ್ರಭು ಸೇರಿದಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಸಿಬ್ಬಂಧಿಗಳು ಉಪಸ್ಥಿತರಿದ್ದರು.


