ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವೆ ; ವಿನಯ್ ಕುಲಕರ್ಣಿ
ಬೆಳಗಾವಿ : ಬಲಿಷ್ಠ ನಾಯಕರ ಹಿಂದೆ ಕುತಂತ್ರ ಮಾಡುವುದು ಸಹಜ. ನಾನು ನ್ಯಾಯಾಲಯ ಆದೇಶ ಗೌರವಿಸುತ್ತೇನೆ. ಶುಕ್ರವಾರ ಬೆಂಗಳೂರು ಕೋರ್ಟ್ ಗೆ ಹಾಜರಾಗುತ್ತೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಧಾರವಾಡದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಇವರು. ಶುಕ್ರವಾರ ನಾನು ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ. ಮುಂದೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು.
ಪ್ರಕರಣದ ಹಿಂದೆ ಕಾಣದ ಕೈವಾಡ ಇರೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅದು ಸಹಜವಾಗಿ ಇದ್ದೇ ಇರುತ್ತದೆ. ಬಲಿಷ್ಠ ನಾಯಕರ ಹಿಂದೆ ಈ ರೀತಿ ಕುತಂತ್ರ ಮಾಡುವುದು ಸಹಜ. ಇದಕ್ಕೆ ಏನು ಮಾಡೋಕೆ ಆಗುವುದಿಲ್ಲ ಎದುರಿಸಬೇಕಾಗುತ್ತದೆ ಎಂದರು.
ವಿನಯ ಕುಲಕರ್ಣಿ ಸಚಿವರಾಗುತ್ತಾರೆ ಎನ್ನುವ ಕಾರಣಕ್ಕೆ ಸಮಯ ನೋಡಿಕೊಂಡು ಕುತಂತ್ರ ಮಾಡಿದರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಮುಂದೆ ಏನು ಆಗುತ್ತದೆ ನೋಡೋಣ. ನನ್ನ ಪಕ್ಷ, ಕ್ಷೇತ್ರದ ಜನರು ನನ್ನ ಜೊತೆಗಿದ್ದಾರೆ. ನನ್ನ ಪತ್ನಿ, ಮಕ್ಕಳು ಹೊರಗಡೆ ಇದ್ದು ಎಲ್ಲವನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ, ಯಾವುದೇ ಸಮಸ್ಯೆ ಇಲ್ಲ ಎಂದು ವಿನಯ ಕುಲಕರ್ಣಿ ಉತ್ತರಿಸಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರುವೆ. ಕೇಸ್ ಏನಾಗುತ್ತದೆ ನೋಡುತ್ತೇನೆ. ನನಗೆ ಸಚಿವ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು. ನನ್ನ ವಿರುದ್ಧ ಕುತಂತ್ರ ಮಾಡಿದವರಿಗೆ ಸಂದೇಶ ಕೊಡುವ ಅವಶ್ಯಕತೆ ಇಲ್ಲ. ನನ್ನ ವಿರೋಧಿಗಳಿಗೆ ಕಾಲವೇ ಉತ್ತರಿಸುತ್ತದೆ. ಕಾಲಾಯ ತಸ್ಮೈ ನಮಃ ಎಂದಷ್ಟೇ ವಿನಯ ಕುಲಕರ್ಣಿ ಮಾಧ್ಯಮಗಳ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.


