ಈಜಲು ಹೋಗಿದ್ದ ಮೂವರು ಮಕ್ಕಳು ನದಿಯಲ್ಲಿ ಮುಳುಗಿ ಸಾವು
ಬಾಗಲಕೋಟೆ : ಯುಗಾದಿ ಹಬ್ಬದ ದಿನವೇ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟ ಘಟನೆ ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ನಡೆದಿದೆ.
ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಬಾಲಕರು ನೀರುಪಾಲಾಗಿದ್ದಾರೆ. ಮೃತ ಬಾಲಕರನ್ನು ಸೋಮಶೇಖರ್ ದೇವರಮನಿ (17), ಪರನಗೌಡ ಬೀಳಗಿ (15) ಹಾಗೂ ಮಲ್ಲಪ್ಪ ಬಗಲಿ (16) ಎಂದು ಗುರುತಿಸಲಾಗಿದೆ.
ಮೂವರು ಬಾಲಕರ ಪೈಕಿ ಸೋಮಶೇಖರ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಮೃತ ಬಾಲಕರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ನಿವಾಸಿಗಳಾಗಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


