ಬೆಳಗಾವಿ ಚಳಿಗಾಲ ಅಧಿವೇಶನ ದಿನಾಂಕ ನಿಗದಿಗೆ ಕರವೇ ಆಗ್ರಹ
ಬೆಳಗಾವಿ : ಉತ್ತರ ಕರ್ನಾಟಕ ಶಕ್ತಿ ಕೇಂದ್ರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಬೇಕಿರುವ ಚಳಿಗಾಲ ಅಧಿವೇಶನದ ದಿನಾಂಕವನ್ನು ಕೂಡಲೇ ಸರ್ಕಾರ ನಿಗದಿ ಮಾಡುವಂತೆ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ದಿನಾಂಕವನ್ನು ಇತ್ತೀಚಿಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ಮಾಡಬೇಕಿತ್ತು, ಆದರೆ ಸುವರ್ಣಸೌಧದ ಬದಲಾಗಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸುವ ಚರ್ಚೆ ಜೋರಾಗುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಅಧಿವೇಶನ ನಡೆಸದೇ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕು. ತುರ್ತಾಗಿ ಸಚಿವ ಸಂಪುಟದ ಸಭೆ ನಡೆಸಿ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಕರವೇ ಆಗ್ರಹಿಸಿದೆ.
ಬೆಳಗಾವಿ ಮಹಾನಗರದ ರಸ್ತೆಗಳು ಹಾಳಾಗಿದ್ದು ಅಧಿವೇಶನದ ಮೊದಲು ನಗರದ ರಸ್ತೆಗಳನ್ನು ದುರಸ್ತಿ ಮಾಡಬೇಕು, ನಗರದ ಸ್ವಚ್ಛತೆಯ ಬಗ್ಗೆ ಕ್ರಮ ಜರುಗಿಸಬೇಕು, ಬೆಳಗಾವಿ ಮಹಾನಗರದ ಅಭಿವೃದ್ಧಿಗೆ ಸರ್ಕಾರ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಕಡ್ಡಾಯವಾಗಿ ಭಾಗವಹಿಸಿ ಪಕ್ಷಾತೀತವಾಗಿ ಈ ಭಾಗದ ಸಮಸ್ಯೆ ಕುರಿತು ಧ್ವನಿ ಎತ್ತಬೇಕು. ಈ ಬಾರಿಯ ಅಧಿವೇಶನ ಉತ್ತರ ಕರ್ನಾಟಕದ ಜನರಿಗೆ ಒಳಿತಾಗಬೇಕು ಎಂದು ಆಗ್ರಹಿಸಿದ್ದಾರೆ.


