ಉಪ ಚುನಾವಣೆ ಕದನ ; ಆಂತರಿಕ ವರದಿಯಿಂದ ಕಂಗಾಲಾದ ಕಾಂಗ್ರೆಸ್ ನಾಯಕರು
ಬೆಂಗಳೂರು : ರಾಜ್ಯದಲ್ಲಿ ಸಧ್ಯ ಮೂರು ಕ್ಷೇತ್ರಗಳ ಉಪ ಚುನಾವಣೆ ಕಾವು ಜೋರಾಗಿದ್ದು ಇಂದು ಸಂಜೆ ಬಹಿರಂಗ ಸಮಾವೇಶಕ್ಕೆ ತೆರೆ ಬಿದ್ದಿದೆ. ಈ ಮಧ್ಯೆ ಮೂರು ಕ್ಷೇತ್ರಗಳನ್ನು ಗೆದ್ದು ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಕೈ ನಾಯಕರಿಗೆ ತಲೆನೋವು ಶುರುವಾಗಿದೆ.
ಹೌದು ಈಗಾಗಲೇ ಮೂರು ಕ್ಷೇತ್ರಗಳ ಆಂತರಿಕ ವರದಿ ಸರ್ಕಾರದ ಕೈ ಸೇರಿದ್ದು ಕೈ ನಾಯಕರನ್ನು ಕಂಗಾಲಾಗಿಸಿದೆ. ಇತ್ತ ಚನ್ನಪಟ್ಟಣ ಗೆಲ್ಲಲು ಡಿ.ಕೆ ಸಹೋದರರು ಪ್ರಯತ್ನ ನಡೆಸಿದ್ದರೆ, ಅತ್ತ ಸಂಡೂರು ಹಾಗೂ ಶಿಗ್ಗಾಂವಿ ಗೆಲ್ಲಲು ಸಿಎಂ ಸೇರಿ ಸಚಿವ ಸಂಪುದ ಪ್ರಮುಖರು ಒಟ್ಟಾಗಿದ್ದಾರೆ. ಈ ಮಧ್ಯೆ ಆಂತರಿಕ ವರದಿ ವಿಭಿನ್ನವಾಗಿದೆ.
ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಸಧ್ಯ ಕಾಂಗ್ರೆಸ್ ಗೆ ಕೊಂಚ ತೊಡಕಾಗುವ ಲಕ್ಷಣ ಇದೆ ಎಂದು ಕಾಂಗ್ರೆಸ್ ಆಂತರಿಕ ವರದಿಯಿಂದ ತಿಳಿದುಬಂದಿದೆ. ಇದೇ ಕಾರಣಕ್ಕೆ ಕೈ ನಾಯಕರಿಗೆ ಈ ವರದಿ ಸಂಕಷ್ಟ ತಂದೊಡ್ಡಿದ್ದು ಇದೇ ರೀತಿಯಲ್ಲಿ ಉಪ ಚುನಾವಣೆ ಉಲ್ಟಾ ಹೊಡೆದರೆ ಹೇಗೆ ಎಂಬ ಚಿಂತೆ ಮನೆ ಮಾಡಿದೆ.
ಮುಡಾ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣ, ವಕ್ಫ್ ವಿವಾದ ಸೇರಿದಂತೆ ಇನ್ನೀತರ ಕಾರಣಗಳಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊಂದಿದ್ದಾರೆ. ಆದರೆ ಗ್ಯಾರಂಟಿ ಯೋಜನೆ ಕೊಟ್ಟ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರ ಗೆಲುವಿನ ವಿಶ್ವಾಸ ಮನೆಮಾಡಿದೆ.
ಒಂದುವೇಳೆ ಕಾಂಗ್ರೆಸ್ ಆಂತರಿಕ ಸಮೀಕ್ಷೆಯಂತೆ ಫಲಿತಾಂಶ ಉಲ್ಟಾ ಹೊಡೆದರೆ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬುದು ಎಂದು ರಾಜಕೀಯ ತಜ್ಞರು ವಿಶ್ಲೇಷಣೆ. ಆದರೆ ಜನ ಯಾವ ಫಲಿತಾಂಶ ನೀಡುತ್ತಾರೆ ಎಂಬುದು ಫಲಿತಾಂಶದಿಂದಲೇ ತಿಳಿದುಬರಬೇಕು.


