BELAGAVI – ಒಂದೇ ದಿನದಲ್ಲಿ ಇಬ್ಬರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್
ಬೆಳಗಾವಿ : ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಅತ್ಯಾಚಾರಿಗಳಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
ಪ್ರಕರಣ – ೦೧ : ರಾಯಬಾಗ ತಾಲೂಕಿನ ಆಶೀಷ ಕಾಂಬಳೆ ( 25 ) ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಆಕೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. 2016 ರ ಡಿಸೆಂಬರ್ 29 ರಂದು ಬಾಲಕಿ ಶಾಲೆಗೆ ಹೋಗಿ ಮರಳಿ ಮನೆಗೆ ಬರುವ ಸಂದರ್ಭದಲ್ಲಿ ಸಂಜೆ ಮನೆಯಿಂದ ಹೊರಗೆ ಬರುವಂತೆ ಹೇಳಿದ್ದ. ಅಪರಾಧಿ ಆಶೀಷ ಕಾಂಬಳೆ ಮಾತು ನಂಬಿ ಬಂದಿದ್ದ ಬಾಲಕಿಯನ್ನು ಈತ ಕರೆದುಕೊಂಡು ಮಹಾರಾಷ್ಟ್ರ ಗಣೇಶವಾಡಿಗೆ ತೆರಳಿದ್ದ.
ನಂತರ ಬಾಲಕಿಯನ್ನು ಒಂದು ಮನೆಯಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಚಿಕ್ಕೋಡಿ ತಾಲೂಕಿನ ಅಂಕಲಿ ಯಲ್ಲಿ ಬಿಟ್ಟು ಪರಾರಿಯಾಗಿದ್ದ. ಈ ಕುರಿತು ಜಿಲ್ಲಾ
ಪೋಕ್ಸೋ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳಾದ ಬಿ.ಎಸ್ ಲೋಕಾಪುರ ಹಾಗೂ ಪ್ರೀತಂ ಶ್ರೇಯಕರ್ ಪ್ರಕರಣದ ಕುರಿತು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಸಿ.ಎಮ್ ಪುಷ್ಪಲತಾ ಅವರಿದ್ದ ಪೀಠ ಒಟ್ಟು 25 ಸಾಕ್ಷಗಳು ಹಾಗೂ 45 ದಾಖಲೆಗಳ ಆಧಾರದ ಮೇಲೆ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ಜೊತೆಗೆ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರು. ಪರಿಹಾರ ಘೋಷಿಸಿದೆ. ಸರ್ಕಾರದ ಪರ ಎಲ್.ವ್ಹಿ ಪಾಟೀಲ್ ವಾದ ಮಂಡಿಸಿದ್ದರು.
ಪ್ರಕರಣ – ೦೨ : ರಾಯಬಾಗ ತಾಲೂಕಿನ ಅರ್ಬಜಸಾಹೇಬ ರಸೂಲ ನಾಲಬಂದ ( 19 ) ಅಪ್ರಾಪ್ತ ಬಾಲಕಿಯನ್ನು 2018 ಮೇ. 29 ರಂದು ನಿಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಅಂಕಲಿ ಕ್ರಾಸ್ ನ ದಿಗ್ಗೆವಾಡಿ ಬಳಿಯ ಯಾರು ಇಲ್ಲದ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದ.
ಈ ಕುರಿತು ಜಿಲ್ಲಾ ಪೋಕ್ಸೋ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳಾದ ಮಂಜುನಾಥ ನಡುವಿನಮನಿ ಹಾಗೂ ಪ್ರೀತಂ ಶ್ರೇಯಕರ್ ಪ್ರಕರಣದ ಕುರಿತು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಸಿ.ಎಮ್ ಪುಷ್ಪಲತಾ ಅವರಿದ್ದ ಪೀಠ ಒಟ್ಟು 17 ಸಾಕ್ಷಗಳು ಹಾಗೂ 41 ದಾಖಲೆಗಳ ಪರಿಶೀಲನೆ ನಂತರ ಆರೋಪಿತನ ಕೃತ್ಯ ಸಾಬೀತಾಗಿದ್ದು ಅರ್ಬಜಸಾಹೇಬನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ಜೊತೆಗೆ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರು. ಪರಿಹಾರ ಘೋಷಿಸಿದೆ. ಸರ್ಕಾರದ ಪರ ಎಲ್.ವ್ಹಿ ಪಾಟೀಲ್ ವಾದ ಮಂಡಿಸಿದ್ದರು.


