ಅಥಣಿ : ತೀರ್ಥಯಾತ್ರೆಗೆಂದು ತೆರಳುತ್ತಿದ್ದವರು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ್ ತಾಲೂಕಿನ ಬಸ್ತವಾಡೆ ಗ್ರಾಮದ ವೇದಗಂಗಾ ನದಿಯಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಅಥಣಿಯ ರೇಷ್ಮಾ ಏಳಮಲೆ (34) ಮತ್ತು ಯಶ್ (17) ಹಾಗೂ ಮಹಾರಾಷ್ಟ್ರ ಮೂಲದ ಜಿತೇಂದ್ರ ವಿಲಾಸ್ ಲೋಕ್ರೆ (36), ರುಕ್ದಿ ಗ್ರಾಮದ ಸವಿತಾ ಅಮರ್ ಕಾಂಬಳೆ (27)
ಮೃತ ದುರ್ದೈವಿಗಳು.‌

ಜಿತೇಂದ್ರ ವಿಲಾಸ್ ಲೋಕ್ರೆ, ಸವಿತಾ ಅಮರ್ ಕಾಂಬಳೆ, ರೇಷ್ಮಾ ದಿಲೀಪ್​​ ಮೃತದೇಹಗಳು ಪತ್ತೆಯಾಗಿದ್ದು, ಯಶ್ ದಿಲೀಪ್ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ನಾಲ್ವರುತೀರ್ಥಯಾತ್ರೆಗೆ ತೆರಳುತಿದ್ದರು. ಶುಕ್ರವಾರ (ಮೇ 17)ರ ರಾತ್ರಿ ಆನೂರು ಗ್ರಾಮದಲ್ಲಿನ ಅತಿಥಿ ಗೃಹದಲ್ಲಿ ತಂಗಿದ್ದರು. ಬೆಳಿಗ್ಗೆ ಪಕ್ಕದ ಗ್ರಾಮ ಬಸ್ತೆವಾಡದಲ್ಲಿನ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ.

ಈ ವೇಳೆ ಇಬ್ಬರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾರೆ. ಇವರನ್ನು ಕಾಪಾಡಲು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾಗಲ್ ಪುರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.