ಮಹಾ ಮಳೆಯಿಂದ ಸಂಕಷ್ಟದಲ್ಲಿ ಗಡಿಭಾಗದ ಜನ
ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ ಹಾಗೂ ಖಾನಾಪುರದಲ್ಲಿ ನದಿಗಳಿಗೆ ಅಡ್ಡಲಾದ ಸೇತುವೆಗಳು ಜಲಾವೃತವಾಗಿದ್ದು, ಕೃಷ್ಣಾ ನದಿ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಖಾನಾಪುರ ತಾಲೂಕಿನ ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಗೌಳಿವಾಡ, ಪಾಸ್ತೊಳ್ಳಿ, ಕೊಂಗಳಾ ಹಾಗೂ ಗವಾಳಿ ಗ್ರಾಮಗಳಿಗೆ ಸಾಗುವ ರಸ್ತೆ ಕಡಿತಗೊಂಡಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕೊಯ್ನಾದಲ್ಲಿ ಸುಮಾರು 253 ಮಿ.ಮೀಟರ್ ಮಳೆಯಾಗಿದ್ದು ಕೃಷ್ಣಾ ನದಿಗೆ ರಾಜಾಪೂರ ಬ್ಯಾರೆಜ್ ನಿಂದ ಸುಮಾರು 49,500 ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಚಿಕ್ಕೋಡಿ ಹಾಗೂ ನಿಪ್ಪಾಣಿಯಲ್ಲಿ ಕೃಷ್ಣಾ ನದಿ ಜೊತೆಗೆ ವೇದಗಂಗಾ ದೂಧ್ ಗಂಗಾ ನದಿಗಳಲ್ಲಿಯೂ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ಎರಡೂ ತಾಲೂಕಿನ ಏಳು ಸಣ್ಣ ಸೇತುವೆಗಳು ಜಲಾವೃತವಾಗಿದ್ದು ಜನರು ಸಂಚಾರ ಮಾಡದಂತೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿದ್ದಾರೆ.
ಇನ್ನೂ ಗೋಕಾಕ್ ತಾಲೂಕಿನ ಘಟಪ್ರಭಾ ನದಿ ಹಾಗೂ ಖಾನಾಪುರ ಮಲಪ್ರಭಾ ನದಿಯಲ್ಲಿ ಒಳ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ನದಿ ಪಾತ್ರದ ಜನರಿಗೆ ಆತಂಕ ಹೆಚ್ಚಾಗಿದೆ.
ಬೆಳಗಾವಿ ನಗರದಲ್ಲಿಯೂ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇನ್ನೂ ಚರಂಡಿ ನೀರು ರಸ್ತೆಗಳಿಗೆ ನುಗ್ಗುತ್ತಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಿದ್ದು ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.


