ರಾಯಬಾಗ : ಇಟ್ಕೊಂಡಿವನ ಜೊತೆಗೂಡಿ ಹೆತ್ತು, ಹೊತ್ತು ಸಾಕಿದ್ದ ಮಗನಿಗೆ ತಾಯಿಯೇ ಚಟ್ಟ ಕಟ್ಟಿದ ಘಟನೆ ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ನಡೆದಿದೆ.

ರಾಯಬಾಗದಲ್ಲಿ ಪಾತ್ರೆ ಅಂಗಡಿ ನಡೆಸುತ್ತಿದ್ದ ಸುಧಾ ಬೋಸಲೆಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇತ್ತು. ಇದನ್ನು ಮಗ ಅಡ್ಡಿಪಡಿಸುತ್ತಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಮಲಗಿದ್ದ ಮಗ ಹರಿಪ್ರಸಾದ್ ಬೋಸಲೆ(22) ಎಂಬಾತನನ್ನು ಉಸಿರುಗಟ್ಟಿಸಿ ಕೊಂದು ಹೃದಯಾಘಾತದಿಂದ ಮೃತಪಟ್ಟ ಎಂದು ಬಿಂಬಿಸಲಾಗಿತ್ತು.

ಮೇ.28ರಂದು ಹರಿಪ್ರಸಾದ  ತೀರಿಹೋದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಂಬಂಧಗಳಿಗೆ ಅನುಮಾನ ಮೂಡಿತ್ತು.
ಕತ್ತಿನಲ್ಲಿ ಕಲೆಗಳು ಇರುವುದನ್ನ ಗಮನಿಸಿ, ಸಂಶಯಾಸ್ಪದ ಸಾವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರದಲ್ಲೇ ತಾಯಿ ತನ್ನ ಅನೈತಿಕ ಸಂಬಂಧಕ್ಕೆ ತೊಂದರೆ ನೀಡಿದ್ದ ಮಗನನ್ನು ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಯಬಾಗ ಪೊಲೀಸ್ ಠಾಣೆ ಸಿಪಿಐ ಮುಲ್ಲಾ ನೇತೃತ್ವದ ತಂದ ಆರೋಪಿಯನ್ನು ವಿಚಾರಣೆ ಮಾಡಿದ್ದು, ಕೊಲೆ ಎಂದು ತಿಳಿದುಬಂದಿದೆ. ಪಾಪಿ ತಾಯಿ ಸುಧಾ ಬೋಸಲೆ, ಪ್ರಿಯಕರ ಕುಮಾರ್ ಬಬಲೇಶ್ವರ, ದೊಡ್ಡಮ್ಮ ವೈಶಾಲಿ ಮಾನೆ, ಸಹೋದರ ಗೌತಮ್ ಮಾನೆ, ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಎಂಟು ಜನರಿಂದ ಕೊಲೆ ನಡೆದಿದ್ದು ತಿಳಿದುಬಂದಿದೆ.

ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ಸುಧಾ ಜೀವನ ನಡೆಸಿದ್ದಳು. ಈ ವೇಳೆ ಪಾತ್ರೆ ಕೊಳ್ಳಲು ಬಂದು ಸುಧಾನ ಮನಸ್ಸು ಕದ್ದಿದ್ದ ಕುಮಾರ್ ಎಂಬಾತ. ಇವರ ಇಬ್ಬರ ಅನೈತಿಕ ಸಂಬಂಧ ಮಗ ಹರಿಪ್ರಸಾದ್‌‌ಗೆ ಗೊತ್ತಾಗಿತ್ತು.
ಇದು ಸರಿಯಲ್ಲ ಎಂದು ತಾಯಿಗೆ ಬುದ್ಧಿವಾದ ಹೇಳಿದ್ದ ಮಗ ಹರಿಪ್ರಸಾದನನ್ನು  ಪ್ಲಾನ್ ಮಾಡಿಕೊಂಡು ಹರಿಪ್ರಸಾದ ಕೊಲೆ ಮಾಡಿದ್ದರು.