ಬೆಳಗಾವಿ : ರಸ್ತೆ ಕಾಮಗಾರಿ ಹಣ ಬಿಡುಗಡೆ ಆಗಿಲ್ಲದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೆಸರನ್ನು ವಾಟ್ಸಪ್ ಮೆಸೇಜ್ ನಲ್ಲಿ ಉಲ್ಲೇಖಿಸಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ತನಿಖೆ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದು ನಮಗೆ ನ್ಯಾಯ ಕೊಡಿಸುವಂತೆ ಮೃತ ಸಂತೋಷ ಪತ್ನಿ ಜಯಶ್ರೀ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ನನ್ನ ಗಂಡ ಸಂತೋಷ ಪಾಟೀಲ 12 ಏಪ್ರಿಲ್ 2022ರಂದು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಕೂಡಲೇ ಏ.14 ರಂದು ಅವರು ಮಾಡಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 15 ದಿನದಲ್ಲಿ ಆರೋಪ ಮುಕ್ತನಾಗಿ ಹೊರ ಬರುವುದಾಗಿ ನೀಡಿರುವ ಹೇಳಿಕೆಯಿಂದ ನಾನಾ ಅನುಮಾನ ಕಾಡುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ ಎಂದು ಹೇಳಲಾಗಿದೆ.
ಸರಕಾರದ ಭಾಗವಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ಪ್ರಭಾವನ್ನು ಬಳಸಿಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನನ್ನ ಗಂಡ ( ಸಂತೋಷ) ಆತ್ಮಹತ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸಿ ತಮಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ ಎಂದು ತಿಳಿದು ಬಂದಿದೆ.
ನನ್ನ ಗಂಡ ( ಸಂತೋಷ) ಹಿಂಡಲಗಾ ಗ್ರಾಪಂ ವ್ಯಾಪ್ತಿಯಲ್ಲಿ 108 ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದರ ಬಿಲ್ ಮಂಜೂರು ಮಾಡಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಆಪ್ತರು 40% ಕಮಿಷನ್ ಕೇಳಿದ ವಿಷಯವೂ ಕೂಡ ಸಂತೋಷ ಹೇಳಿದ್ದರು. ಆದರೂ ಕೂಡ ಪ್ರಮುಖ ಆರೋಪಿ ಕೆ.ಎಸ್.ಈಶ್ವರಪ್ಪ 15 ದಿನದಲ್ಲಿ ಆರೋಪ ಮುಕ್ತನಾಗಿ ಹೊರ ಬರುತ್ತೇನೆ ಎಂದು ನೀಡಿರುವ ಹೇಳಿಕೆ ನಮಗೆ ಬಹಳ ಆಶ್ಚರ್ಯ ತಂದಿದೆ.
ಅಲ್ಲದೆ, ಮಾಜಿ ಸಚಿವ ಈಶ್ವರಪ್ಪನವರ ಅಣತೆಯಂತೆ ತನಿಖೆ ನಡೆಯುತ್ತಿದೆ ಎನ್ನುವ ಅನುಮಾನವೂ ಕಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯಪಾಲರು ಸಂತೋಷ ಪಾಟೀಲ ಅನುಮಾನಾಸ್ಪಾದ ಸಾವಿನ ಹಿಂದೆ ಇರುವ ರಹಸ್ಯವನ್ನು ಭೇದಿಸಿ ಆರೋಪಿತರು ಎಷ್ಟೆ ಪ್ರಭಾವಿಯಾಗಿದ್ದರೂ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ರುಜುವಾತು ಮಾಡುವಂತೆ ನನಗೆ ಮತ್ತು ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಸಂತೋಷ ಪಾಟೀಲ ಪತ್ನಿ ಜಯಶ್ರೀ ಒತ್ತಾಯಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.



