ಅಥಣಿ : ಪ್ರೀತಿಯ ಆಸೆ ತೋರಿಸಿ ವಿದ್ಯಾರ್ಥಿನಿಯನ್ನು ಅಪಹರಿಸಿದ ಶಿಕ್ಷಕ ; ಪೋಷಕರು ಕಣ್ಣೀರು…!
ಅಥಣಿ : ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಬದುಕು ರೂಪಿಸಲು ಸಹಕಾರಿಯಾಗಬೇಕಿದ್ದ ಶಿಕ್ಷಕನೋರ್ವ ತರಗತಿಯಲ್ಲಿ ಪಾಠ ಹೇಳುವ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿ ತಾಲೂಕುವೊಂದರ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೀತಿ ಪ್ರೇಮದ ಹುಚ್ಚು ಹಿಡಿಸಿದ ಅದೇ ಕಾಲೇಜಿನ ಉಪನ್ಯಾಸಕ ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಕಾಗವಾಡ ತಾಲೂಕಿನ ಉಗಾರ ಗ್ರಾಮದ ಪವನ ಕುಮಾರ ಎಂಬ ಅವಿವಾಹಿತ ಉಪನ್ಯಾಸಕ ಅದೇ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಕಳೆದ ಜ. 8 ರಂದು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. 10 ದಿನಗಳು ಕಳೆದರೂ ಇನ್ನೂ ಇವರು ಮರಳಿ ಊರಿಗೆ ಬಂದಿಲ್ಲ, ಪೊಲೀಸರು ಕೂಡ ಶೋಧನಾ ಕಾರ್ಯದಲ್ಲಿ ತೊಡಗಿದ್ದು, ಇಬ್ಬರ ಮೊಬೈಲ್ ಗಳು ಸ್ವಿಚ್ ಆಫ್ ಆಗಿವೆ.
ವಿದ್ಯಾರ್ಥಿನಿಯರ ಪಾಲಕರು ದಿನನಿತ್ಯ ಮಗಳ ಬರುವಿಕೆಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಅಪಹರಣಕ್ಕೆ ಒಳಗಾದ ಬಾಲಕಿಯ ಪಾಲಕರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


