ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ; ರಾತ್ರಿಯೇ ಬೆಂಬಲಿಗರ ಸಭೆ ನಡೆಸಿದ ಲಕ್ಷ್ಮಣ ಸವದಿ…!
ಅಥಣಿ : ಕಳೆದ ಕೆಲ ದಿನಗಳಿಂದ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಕ್ಷೇತ್ರದ ಜನರ ಶ್ರೀರಕ್ಷೆ ಇರುವುದರಿಂದ ವಿರೋಧಿಗಳ ಕುತಂತ್ರಕ್ಕೆ ಜಾಗ ಇಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ರಾತ್ರಿ ಬೆಂಬಲಿಗರ ಜೊತೆ ಸಭೆ ನಡೆಸಿ ಮಾತನಾಡಿದರು. ಕ್ಷೇತ್ರದಲ್ಲಿ ನಾನು ಈವರೆಗೂ ಒಬ್ಬರಿಗೂ ಅನ್ಯಾಯ ಮಾಡಿಲ್ಲ. ಬೇಕೆಂದರಲೇ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಒಂದು ತಂಡ ನಿರಂತರವಾಗಿ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದು ಆದರೆ ಇದರಿಂದ ನಮಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ಯುನಿಯನ್ ಅಧ್ಯಕ್ಷ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಬೇಕೆಂದಲೇ ಅವನನ್ನು ಬೆಳಗಾವಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ಘಟನೆ ಮೊದಲೇ ಒಂದು ತಂಡ ಅಲ್ಲಿ ಇತ್ತು. ಇದೆಲ್ಲವನ್ನೂ ನೋಡಿದರೆ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಅಪಪ್ರಚಾರ ನಡೆಯುತ್ತವೆ. ಜಾತಿ, ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಆಗುತ್ತದೆ. ಇದೆಲ್ಲದರ ಅರಿವು ನಮಗಿದೆ. ಕ್ಷೇತ್ರದ ಜನರ ಆಶಿರ್ವಾದ ನಮ್ಮ ಮೇಲೆ ಇರುವವರಿಗೆ ಏನು ಮಾಡಲು ಸಾಧ್ಯವಿಲ್ಲ ಎಂದರು.


