ಅಥಣಿಯಲ್ಲಿ ಇದೆಂತಾ ಅನಿಷ್ಟ ; ಸಾಯಲು ನಿರ್ಧರಿಸಿದ್ದ ಒಂದೇ ಕುಟುಂಬದ ನಾಲ್ವರು..!
ಬೆಳಗಾವಿ : ಆತ ಜೈಲಲ್ಲಿರುವ ಬಾಬಾ. ಹರಿಯಾಣದ ವಿವಾದಿತ ಸಂತ ಬಾಬಾ ರಾಮಪಾಲ್ ನ ಕಟ್ಟಾ ಅನುಯಾಯಿಗಳು ಇವರು. ಪ್ರತಿದಿನ ಆತನ ಪ್ರವಚನ ಕೇಳಿ ಇಡೀ ಕುಟುಂಬ ಪ್ರಾಣತ್ಯಾಗ ಮಾಡಲು ನಿರ್ಧರಿಸಿತ್ತು.
ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ತುಕಾರಾಮ ಇರಕರ್ ಕುಟುಂಬದ ನಾಲ್ವರು ಸದಸ್ಯರು ಹರಿಯಾಣದ ವಿವಾದಿತ ಬಾಬಾ ರಾಮಪಾಲ್ ಪ್ರವಚನದಿಂದ ಪ್ರಭಾವಿತರಾಗಿ ಸೆಪ್ಟೆಂಬರ್ 8 ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದರು.
ಹರಿಯಾಣ ಸಂತ ಬಾಬಾ ರಾಮಪಾಲ್ ಪ್ರವಚನದಿಂದ ಪ್ರೇರಣೆ ಪಡೆದಿದ್ದ ಅನಂತಪುರ ಗ್ರಾಮದ ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಪುತ್ರ ರಮೇಶ್, ಸೊಸೆ ವೈಷ್ಣವಿ ದೇಹತ್ಯಾಗಕ್ಕೆ ನಿರ್ಧರಿಸಿದ್ದರು. ನಾವು ಇಲ್ಲಿ ಇರಲ್ಲ, ಬಾಬಾ ನಮ್ಮನ್ನು ಕರೆದೊಯ್ಯುವರು. ನಮಗೆ ಮೋಕ್ಷ ಕೊಡಿಸುತ್ತಾರೆ ಎಂದು ಹೇಳುತ್ತಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಹಾಗೂ ಕವಲಗುಡ್ಡದ ಅಮರೇಶ್ವರ ಮಹಾರಾಜರು ತುಕಾರಾಮ ಇರಕರ್ ಕುಟುಂಬ ಭೇಟಿಮಾಡಿ ಬುದ್ಧಿವಾದ ಹೇಳಿದ್ದಾರೆ.
ಬಾಬಾ ರಾಮಪಾಲ್ ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದು ಮೌಢ್ಯಕ್ಕೆ ಬಲಿಯಾಗದೆ ಉತ್ತಮ ಜೀವನ ಸಾಗಿಸುವಂತೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇದರಿಂದ ದೇಹತ್ಯಾಗ ಮಾಡುವ ನಿರ್ಧಾರದಿಂದ ಕುಟುಂಬ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.


