ಗಣೇಶ ಮೂರ್ತಿ ವಿಸರ್ಜನೆವೇಳೆ ಯುವಕನ ಕಣ್ಣಿಗೆ ಗಾಯ
ಕುಷ್ಟಗಿ: ಪಟ್ಟಣದಲ್ಲಿ ನಡೆದ 5ನೇ ದಿನದ ಗಣೇಶ ವಿಸರ್ಜನೆ ಮೆರವಣಿಯಲ್ಲಿ ಪಟಾಕಿ ಸಿಡಿದು ಯುವಕನೊಬ್ಬನ ಕಣ್ಣು ತೀವ್ರ ಗಾಯವಾದ ಘಟನೆ ಬುಧವಾರ ನಡೆದಿದೆ.
ಪಟ್ಟಣದ 1ನೇ ವಾರ್ಡ್ ನ ಮಾರುತಿ ನಗರದ ನಿವಾಸಿ ಕಲ್ಲೇಶ ಸುಲ್ಲೇಖಿ (26) ಗಾಯಗೊಂಡ ಯುವಕ. ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಪಟಾಕಿ ಸಿಡಿಸುವ ಭರಾಟೆಯಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ತಗುಲಿ ಯುವಕನಿಗೆ ತೀವ್ರ ಗಾಯವಾಗಿದೆ.
ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಪಿಎಸ್ಐ ಹನುಮಂತಪ್ಪ ತಳವಾರ ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ.


